ಖಮ್ಮಮ್: ಸ್ವಂತ ಅಣ್ಣನ ಮೇಲೆ ಯುವತಿಯೊಬ್ಬಳು ಅತ್ಯಾಚಾರ ಆರೋಪ ಹೊರಿಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ದೂರು ದಾಖಲಾದ ದಿನದ ಬೆನ್ನಲ್ಲೇ ಆರೋಪಿ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸಂತ್ರಸ್ತ ಯುವತಿಯ ಸಹೋದರ ವಿಜಯ್ ನೇಣಿಗೆ ಶರಣಾಗಿದ್ದಾನೆ. ಮೊನ್ನೆಯಷ್ಟೇ ದೂರು ದಾಖಲಿಸಿದ್ದ ಸಹೋದರಿ, ಸ್ವಂತ ಅಣ್ಣನೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಹೇಳಿದ್ದಳು. ಭದ್ರಾದ್ರಿ ಕೊಟ್ಟಗುಡೆಮ್ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ತಂದೆಯಿಲ್ಲದ ಸಂತ್ರಸ್ತೆ ತನ್ನ ತಾಯಿ ಮತ್ತು ಸಹೋದರನ ಜತೆ ವಾಸವಿದ್ದಳು. ತನ್ನ ಅಣ್ಣನ ಕ್ರೌರ್ಯದ ಬಗ್ಗೆ ತಾಯಿ ಮತ್ತು ಅಜ್ಜಿಗೆ ಹೇಳಿಕೊಂಡರು ಸಹ ಅವರು ತಲೆಕೆಡಿಸಿಕೊಳ್ಳಲಿಲ್ಲವಂತೆ. ಪಾಲಕರು ಸಂತ್ರಸ್ತೆಯ ಬೆಂಬಲಕ್ಕೆ ನಿಲ್ಲದಿದ್ದಾಗ ಆಕೆ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ಹೇಳಿಕೆಯಂತೆ ವಿಜಯ್ ಕೆಲವು ತಿಂಗಳಿಂದ ಸಹೋದರಿಗೆ ಕಿರುಕುಳ ನೀಡಿತ್ತಿದ್ದನಂತೆ. ಈ ಬಗ್ಗೆ ತಾಯಿಯ ಬಳಿ ಹೇಳಿಕೊಂಡರು ಯಾವುದೇ ಸಹಾಯ ಮಾಡಲಿಲ್ಲ. ಬಳಿಕ ನೋವನ್ನು ಹೇಳಿಕೊಳ್ಳಲು ಅಜ್ಜಿ ಮತ್ತು ತಾತನ ಮನೆಗೆ ಹೋದರೆ ಅಲ್ಲಿಯೂ ಸಹ ಬೆಂಬಲ ಸಿಗಲಿಲ್ಲ. ಬದಲಾಗಿ ಅಜ್ಜಿ-ತಾತನ ಮಗನು ಸಹ ಅತ್ಯಾಚಾರ ಎಸಗಿದ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೆ, ಈ ಬಗ್ಗೆ ಯಾರಿಗೂ ಹೇಳಿದಂತೆ ಬೆದರಿಕೆಯನ್ನು ಹಾಕಿದ್ದರಂತೆ.
ಕೊನೆಗೂ ಏನಾದರೂ ಆಗಲಿ ಎಂದು ಧೈರ್ಯ ಮಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.