ಬೆಳಗಾವಿ : ಗದಗ ಜಿಲ್ಲೆಯ ನರಗುಂದ ಪಟ್ಟಣ ಮೂಲದ ಅಪ್ರಾಪ್ತೆಯ ಶವ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ಪತ್ತೆಯಾಗಿದೆ. ಅತ್ಯಾಚಾರವೆಸಗಿ ಬೆಳಗಾವಿ ಗಡಿಯಲ್ಲಿ ಮೃತದೇಹವನ್ನು ಬಿಸಾಕಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 15 ವರ್ಷದ ಬಾಲಕಿ ಮಾರ್ಚ್ 20 ರಂದು ಕೂಲಿ ಕೆಲಸಕ್ಕೆಂದು ಮನೆಯಿಂದ ಹೊರ ಹೋಗಿದ್ದಳು. ಈಕೆ ಮರಳಿ ಮನೆಗೆ ಬಾರದಿದ್ದಾಗ ಪೋಷಕರು ಮಾರ್ಚ್ 23 ರಂದು ನರಗುಂದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿನ್ನೆ ತಡರಾತ್ರಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ಬಾಲಕಿಯ ಶವ ದೊರೆತಿದೆ. ಅತ್ಯಾಚಾರವೆಸಗಿ ಕೊಲೆ ಮಾಡಿ ಶವವನನ್ನು ಬಿಸಾಡಿ ಹೋಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ರಾಮದುರ್ಗ ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿ ನರಗುಂದ ಪೊಲೀಸರಿಗೆ ಶವ ಹಸ್ತಾಂತರ ಮಾಡಿದ್ದಾರೆ. ಬಳಿಕ ಪೋಷಕರಿಗೆ ಮೃತದೇಹವನ್ನು ನೀಡಿದ್ದಾರೆ.
ಜೆಸಿಬಿ ಡ್ರೈವರ್ ಮೇಲೆ ಪೋಷಕರ ಸಂಶಯ :
ಸವದತ್ತಿ ತಾಲೂಕಿನ ನಾಗನೂರ ಗ್ರಾಮದ ವ್ಯಕ್ತಿಯೇ ಪುತ್ರಿಯನ್ನು ಕೊಲೆಗೈದಿರುವ ಬಗ್ಗೆ ಬಾಲಕಿಯ ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ. ನರಗುಂದ ಪಟ್ಟಣದಲ್ಲಿ ಬಾಲಕಿಯ ಮನೆ ಹಿಂಭಾಗದಲ್ಲಿ ಈತ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಈ ವೇಳೆ ಬಾಲಕಿ ಜೊತೆಗೆ ಸಲುಗೆ ಬೆಳೆಸಿದ್ದಾನೆ. ಹಾಗಾಗಿ ಈತನೇ ನಮ್ಮ ಪುತ್ರಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರಬಹುದು ಎಂದು ಅವರು ಆರೋಪಿಸಿದ್ದಾರೆ.