ಕರೀಂಗಂಜ್, ಏ.2- ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಯಂತ್ರ ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅಸ್ಸಾಂನ ರತಬರಿ ವಿಧಾನಸಭಾ ಕ್ಷೇತ್ರದ ಒಂದು ಮತಕೇಂದ್ರಕ್ಕೆ ಮರು ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ.ಇಂದಿರಾ ಎಂ.ವಿ.ಶಾಲೆಯ ಮತ ಕೇಂದ್ರದಲ್ಲಿ ನಡೆದ ಮತದಾನದ ಇವಿಎಂ ಯಂತ್ರಗಳನ್ನು ಬಿಜೆಪಿ ಮುಖಂಡನ ಕಾರಿನಲ್ಲಿ ಸಾಗಿಸಲಾಗುತ್ತಿತ್ತು ಎಂದು ಆರೋಪಿಸಿ ಕೆಲವರು ಆರೋಪಿಸಿ ದಾಂಧಲೆ ನಡೆಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ತಬಾರಿ ಕ್ಷೇತ್ರದ ಇಂದಿರಾ ಎಂವಿ ಶಾಲೆಯಲ್ಲಿ ನಡೆದ ಮತದಾನದ ಇವಿಎಂ ಯಂತ್ರಗಳನ್ನು ಕೊಂಡೊಯ್ಯುತ್ತಿದ್ದ ವಾಹನ ದಾರಿಯಲ್ಲಿ ಕೆಟ್ಟುನಿಂತ ಹಿನ್ನಲೆಯಲ್ಲಿ ಯಂತ್ರಗಳನ್ನು ಖಾಸಗಿ ವಾಹನದಲ್ಲಿ ಸಾಗಿಸಲಾಯಿತು ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.ಯಂತ್ರಗಳನ್ನು ಸಾಗಿಸಲು ಸಹಕರಿಸಿದ ಖಾಸಗಿ ವಾಹನ ಬಿಜೆಪಿ ಶಾಸಕರ ಹೆಸರಿನಲ್ಲಿ ನೋಂದಣಿಯಾಗಿತ್ತು. ಹೀಗಾಗಿ ಇದನ್ನು ಗಮನಿಸಿದ ಕೆಲವರು ಉದ್ದೇಶಪೂರ್ವಕವಾಗಿ ಬಿಜೆಪಿ ಶಾಸಕರ ಕಾರಿನಲ್ಲಿ ಇವಿಎಂ ಯಂತ್ರ ಸಾಗಿಸಲಾಗುತ್ತಿದೆ ಎಂದು ಗಲಾಟೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.