ಬೆಂಗಳೂರು: ಸಾರಿಗೆ ಇಲಾಖೆಗೆ ಬರುವ ಆದಾಯ ಇಂಧನ, ವೇತನಕ್ಕೆ ಸಾಲುತ್ತಿಲ್ಲ. ಇಂತಹ ಕಷ್ಟಕಾಲದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸದೇ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಇಲಾಖೆಯ ಹಣಕಾಸು ವೃದ್ಧಿಯಾಗುತ್ತಿದ್ದಂತೆಯೇ ಸಾರಿಗೆ ನೌಕರರ ಬೇಡಿಕೆ ಈಡೇರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದ್ದಾರೆ.
ಏಪ್ರಿಲ್ 7 ರಿಂದ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದು, ಈ ಹಿನ್ನಲೆಯಲ್ಲಿಂದು ಸಚಿವ ಲಕ್ಷ್ಮಣ್ ಸವದಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ, ಸಾರಿಗೆ ನೌಕರರು ಇಟ್ಟಿದ್ದ 10 ಬೇಡಿಕೆಗಳಲ್ಲಿ ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಿದ್ದು, ಉಳಿದ ಬೇಡಿಕೆ ಕುರಿತು ಚರ್ಚೆ ನಡೆಸಲಾಗಿದೆ. ಆರನೇ ಪೇ ಕಮಿಷನ್ ಬೇಡಿಕೆ ಬಗ್ಗೆಯೂ ಚರ್ಚಿಸಲಾಗಿದ್ದು, ಈ ಬಗ್ಗೆಯೂ ಚರ್ಚಿಸಲಾಗಿದೆ. ಆರ್ಥಿಕ ಇಲಾಖೆ ಇದರ ಬಗ್ಗೆ ಎರಡು ದಿನದಲ್ಲಿ ಪರಿಶೀಲನೆ ನಡೆಸಲಿದೆ. ಸಂಸ್ಥೆಯ ಮೇಲಾಗುವ ಹೊರೆಯ ಬಗ್ಗೆ ಲೆಕ್ಕಾಚಾರ ಮಾಡಲಿದೆ ಎಂದರು.
ಪ್ರತಿಭಟನೆ ಮಾಡಿದರೆ ಮಧ್ಯಮ ವರ್ಗ, ಬಡವರ್ಗದವರಿಗೆ ಅನಾನುಕೂಲವಾಗಲಿದೆ. ನೌಕರರಿಗೆ ಕೊಟ್ಟ ಭರವಸೆಯನ್ನು ನಿರಾಸೆಯಾಗದಂತೆ ಈಡೇರಿಸುತ್ತೇವೆ. ಹಿಂದಿನ ಅರಿಯರ್ಸ್ ಎಲ್ಲವನ್ನೂ ನಾವು ನೀಡುತ್ತೇವೆ. ದಿಢೀರ್ ಎಂದು ಪ್ರತಿಭಟನೆಗೆ ಮುಂದಾಗಬೇಡಿ ಎಂದು ಮನವಿ ಮಾಡಿದರು.
ಒಂದು ವೇಳೆ ಪ್ರತಿಭಟನೆ ಮಾಡಿದರೆ ಪರ್ಯಾಯ ವ್ಯವಸ್ಥೆಯಾಗಿ 1200 ಖಾಸಗಿ ಬಸ್ ಗಳನ್ನು ಬಳಸಿಕೊಳ್ಳುತ್ತೇವೆ. ಈ ಬಗ್ಗೆ ಬಜೆಟ್ ನಲ್ಲಿಯೂ ಘೋಷಣೆಯಾಗಿದೆ. ಪ್ರಸ್ತುತ ಖಾಸಗಿ ಬಸ್ನವರು ಪರವಾನಿಗೆ ಸರಂಡರ್ ಮಾಡಿದ್ದಾರೆ. ಸಾರಿಗೆ ನೌಕರರು ಪ್ರತಿಭಟನೆ ನಡೆಸಿದರೆ ಖಾಸಗಿಯವರಿಗೆ ಉಚಿತ ಪರ್ಮಿಟ್ ಕೊಡುತ್ತೇವೆ ಎಂದು ಎಚ್ಚರಿಸಿದರು.
ಸಾರಿಗೆ ಸಂಘಟನೆ ಜೊತೆ 5 ಸಭೆಗಳನ್ನು ನಡೆಸಿದ್ದು, 6ನೇ ವೇತನ ಆಯೋಗದ ಚರ್ಚೆ ಒಂದು ಹಂತಕ್ಕೆ ಬಂದಿದೆ. ಈಗಲೂ ನಾವು ಅದಕ್ಕೆ ಬದ್ಧರಿದ್ದು, ಇಲಾಖೆಗೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳುವುದಾಗಿ ಲಕ್ಷ್ಮಣ್ ಸವದಿ ಹೇಳಿದರು.