ಬೆಂಗಳೂರು (ಮಾ. 24): ಇಂದು ಸ್ಪೋಟಕ ಮಾಹಿತಿ ಬಿಚ್ಚಿಡುತ್ತೇನೆ ಎಂದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನಾನು ನೀಡಬೇಕಾದ ಎಲ್ಲಾ ವಿವರಗಳನ್ನು ಸಿಡಿ ಯುವತಿಯ ಪೋಷಕರೇ ಹೇಳಿದ್ದಾರೆ. ಈ ಹಿನ್ನಲೆ ನನ್ನ ಸುದ್ದಿಗೋಷ್ಟಿಗೆ ಮಹತ್ವ ಇಲ್ಲ. ಈ ಪ್ರಕರಣದ ರೂವರಿ ಯಾರು ಎಂಬುದನ್ನು ಪೋಷಕರು ಒಪ್ಪಿಕೊಂಡಿದ್ದಾರೆ. ಅವರಿಗೆ ಧನ್ಯವಾದಗಳು. ಆ ಮಹಾನ್ ನಾಯಕ ಯಾರು ಎಂಬುದು ಅವರೇ ತಿಳಿಸಿದ್ದಾರೆ. ಆ ಮಹಾನ್ ನಾಯಕ ರಾಜಕಾರಣಕ್ಕೆ ನಾಲಾಯಕ್, ರಾಜಕೀಯದಲ್ಲಿ ಇರಬಾರದು. ಅವನಿಗೆ ಕ್ಷಮೆ ಎಂಬುದು ಇರಬಾರದು. ಒದ್ದು ಒಳಗೆ ಹಾಕಬೇಕು. ಕಾಂಗ್ರೆಸ್ ಅವನನ್ನು ಮುಂದುವರಿಸಬಾರದು ಎಂದು ವಾಗ್ದಾಳಿ ನಡೆಸಿದರು.
ಡಿಕೆ ಶಿವಕುಮಾರ್ ವಿರುದ್ದ ತೊಡೆತಟ್ಟಿದ ಸಾಹುಕಾರ್ ಮುಂದೆ ಕನಕಪುರದಲ್ಲಿ ಶಿವಕುಮಾರ್ ವಿರುದ್ಧ ಚುನಾವಣಾ ಮಾಡುತ್ತೇನೆ. ಆತನನ್ನು ಸೋಲಿಸುವುದೇ ನನ್ನ ಗುರಿ ಎಂದು ಇದೇ ವೇಳೆ ಶಪಥ ಮಾಡಿದರು. ಆತ ಬೆಳಗಾವಿಗೆ ಬಂದರೆ ಸ್ವಾಗತಿಸುತ್ತೇನೆ. ಇಲ್ಲ ಕನಕಪುರದಲ್ಲಿಯೇ ಸೋಲಿಸುತ್ತೇನೆ. ಕನಕಪುರದಲ್ಲಿ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಲು ಸಿದ್ದ. ಇಲ್ಲ, ನನ್ನ ತಮ್ಮನನ್ನು ಕನಕಪುರದಲ್ಲಿ ನಿಲ್ಲಿಸುತ್ತೇನೆ. ತನು ಮನದಿಂದ ಹೋರಾಡುತ್ತೇನೆ. ಆತನನ್ನು ಸೋಲಿಸುತ್ತೇನೆ ಎಂದು ಸವಾಲ್ ಹಾಕಿದರು.
ಎಸ್ಐಟಿ ಮುಂದೆ ಸಾಕ್ಷ್ಯ:
ಆ ಹೆಣ್ಣುಮಗಳ ಬಗ್ಗೆ ನನಗೆ ಗೊತ್ತಿಲ್ಲ. ಅವಳಿಗೂ ನನಗೂ ಸಂಬಂಧ ಇಲ್ಲ. ಜಾರಕಿಹೊಳಿ ಕುಟುಂಬ ಯಾವ ಯುವತಿಗೂ ಮೋಸ ಮಾಡಿಲ್ಲ. ಡಿಕೆ ಶಿವಕುಮಾರ್ ವಿರುದ್ಧ ಅಟ್ರಾಸಿಟಿ ದೂರು ಕೊಡುತ್ತೇನೆ. ನನ್ನ ಬಳಿ 11 ದಾಖಲೆ ಇದೆ. ಅದನ್ನು ಎಸ್ಐಟಿಗೆ ನೀಡುತ್ತೇನೆ. ನರೇಶ್ ಗೌಡನ ಜೊತೆ ಸಂಬಂಧ ಇದೆ ಎಂದು ಒಪ್ಪಿಕೊಂಡಿದ್ದಾನೆ. ಆತ ಕ್ರಿಮಿನಲ್ ಮೈಂಡೆಡ್. ನಿನ್ನೆ ಆಡಿಯೋ ಬಿಡುಗಡೆಯಾಗುತ್ತಿದ್ದಂತೆ ಇಂದು ಆತ ಹೇಳಿಕೆಯನ್ನೇ ತಿರುಚಿದ್ದಾನೆ. ಹಾಗಾಗಿ ನಾನು ಈಗ ಯಾವುದೇ ಸಾಕ್ಷ್ಯವನ್ನು ಬಿಡುಗಡೆ ಮಾಡುವುದಿಲ್ಲ. ಎಲ್ಲವನ್ನು ಎಸ್ಐಟಿಗೆ ನೀಡುತ್ತೇನೆ. ಕಾನೂನಿನ ಮೇಲೆ ನಂಬಿಕೆ ಇದೆ. ಇದರಲ್ಲಿ ಯಾರೆಲ್ಲಾ ಇದ್ದರೆ ಎಂಬುದು ಹೊರ ಬರಲಿದೆ ಎಂದರು.
ಎಸ್ಐಟಿ ವಿಚಾರಣೆ ಬಳಿಕ ಮಾತನಾಡಿದ ಸಿಡಿ ಸಂತ್ರಸ್ತೆ ಪೋಷಕರು, ಇದಕ್ಕೆಲ್ಲಾ ಕಾರಣ ಡಿಕೆ ಶಿವಕುಮಾರ್ ಎಂದು ನೇರವಾಗಿ ಅರೋಪಿಸಿದ್ದಾರೆ. ಅಲ್ಲದೇ ತಮ್ಮ ಹೊಲಸು ರಾಜಕಾರಣಕ್ಕೆ ಮಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.