ಬೆಂಗಳೂರು : ವೀಡಿಯೋದಲ್ಲಿರುವುದು ನಾನಲ್ಲ, ಗ್ರಾಫಿಕ್ಸ್ ಮಾಡಲಾಗಿದೆ ಎಂದು ಯುವತಿಯೇ ಹೇಳಿದ್ದಾಳೆ. ಜತೆಗೆ ಈ ವಿಷಯದಲ್ಲಿ ನಾನು ಯಾರ ಹೆಸರನ್ನು ವೈಯಕ್ತಿಕವಾಗಿ ಹೇಳುವುದಿಲ್ಲ. ಜತೆಗೆ ನಾಳೆ (ಶನಿವಾರ) ಸಂಜೆ ಇನ್ನಷ್ಟು ಮಾಹಿತಿಯನ್ನು ಮಾಧ್ಯಮ ಮತ್ತು ರಾಜ್ಯದ ಜನರ ಮುಂದೆ ಹಂಚಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಎಫ್ಐಆರ್ ಹಾಗೂ ಯುವತಿಯ ಆಡಿಯೋ ಬಿಡುಗಡೆ (ವೈರಲ್) ಬಗ್ಗೆ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ನನ್ನ ಹಳೆಯ ಗೆಳೆಯ. ಅವರು ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರಿಯಬೇಕು. ನನ್ನಂತೆ ರಾಜೀನಾಮೆ ಕೊಡಬಾರದು ಎಂದು ಟಾಂಗ್ ನೀಡಿದರು.
ರಾಜ್ಯದಲ್ಲಿ ಹೋರಾಟ ಮಾಡಬೇಕು. ನನ್ನ ಬಗ್ಗೆ ಡಿ.ಕೆ.ಶಿವಕುಮಾರ್ ಸಾಕಷ್ಟು ಮಾತನ್ನಾಡಿದ್ದಾರೆ. ಈಗ ಅದೆಲ್ಲ ಅಗತ್ಯವಿಲ್ಲ. ನಾನು ದೈವಭಕ್ತ, ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ ಎಂದರು.
ನಾನು ನಿರಪರಾಧಿ, ಈ ಪ್ರಕರಣದಿಂದ ಹೊರಗೆ ಬರುತ್ತೇನೆ, ನನ್ನ ವಿರುದ್ಧ ಎಫ್ಐಆರ್ ಹಾಕಲಿ, 302 ಹಾಕಲಿ. ಎಫ್ಐಆರ್ ದಾಖಲಾದ ತತ್ಕ್ಷಣ ನಾನು ಅಪರಾಧಿ ಅಲ್ಲ. ಮೊದಲು ಎಫ್ಐಆರ್ ತನಿಖೆ ಆಗಬೇಕು. ಅನಂತರ ನಾನು ಕೊಟ್ಟಿರುವ ದೂರಿನ ಆಧಾರದ ಎಫ್ಐಆರ್ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥನಾಗಿದ್ದರೇ ಸ್ವತಃ ನಾನೇ ಶರಣಾಗುತ್ತೇನೆ ಎಂದರು.