ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್ಪಿ) ಹಗರಣ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯವರನ್ನು ಬಂಧಿಸಲು ಬಯಸಿದರೆ ಮೂರು ದಿನಗಳ ಮುಂಗಡ ನೋಟಿಸ್ ನೀಡುವಂತೆ ಬಾಂಬೆ ಹೈಕೋರ್ಟ್ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.
ರಿಪಬ್ಲಿಕ್ ಟಿವಿ, ಎಲ್ಲಾ ರಿಪಬ್ಲಿಕ್ ಟಿವಿ ಚಾನೆಲ್ಗಳನ್ನು ನಡೆಸುವ ಎಆರ್ಜಿ ಔಟಿಯರ್ ಮೀಡಿಯಾ ಇತರ ಉದ್ಯೋಗಿಗಳು ಮತ್ತು ಟೆಲಿವಿಷನ್ ಚಾನೆಲ್ಗಳ ವಿರುದ್ಧದ ತನಿಖೆ 12 ವಾರಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಹಾರಾಷ್ಟ್ರ ಸರ್ಕಾರ ನೀಡಿದ ಹೇಳಿಕೆಯನ್ನು ನ್ಯಾಯಮೂರ್ತಿಗಳಾದ ಎಸ್ಎಸ್ ಶಿಂಧೆ ಮತ್ತು ಮನೀಶ್ ಪಿತಾಲೆ ಅವರ ನ್ಯಾಯಪೀಠ ಸಹ ಒಪ್ಪಿಕೊಂಡಿತು.
ಈ ಪ್ರಕರಣದಲ್ಲಿ ಹಲವಾರು ಪರಿಹಾರಗಳನ್ನು ಕೋರಿ ಗೋಸ್ವಾಮಿ ಮತ್ತು ಎಆರ್ಜಿ ಮಾಧ್ಯಮ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.ಮುಂಬೈ ಪೊಲೀಸರ ಅಪರಾಧ ವಿಭಾಗದ ಬಳಿ ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಅರ್ಜಿದಾರರು ಹೇಳಿಕೊಂಡಿದ್ದರು ಆದರೆ ಚಾರ್ಜ್ಶೀಟ್ನಲ್ಲಿ ಕೇವಲ ಶಂಕಿತರೆಂದು ಹೆಸರಿಸುವ ಮೂಲಕ ತನಿಖೆಯನ್ನು ನಡೆಸುತ್ತಿದೆ ಎಂದು ವಾದಿಸಿದ್ದಾರೆ.
ಸೋಮವಾರ ನಡೆದ ಕೊನೆಯ ವಿಚಾರಣೆಯಲ್ಲಿ, ಪ್ರಕರಣವೊಂದರಲ್ಲಿ ಯಾರನ್ನಾದರೂ ಆರೋಪಿಗಳೆಂದು ಹೆಸರಿಸದೆ ತಿಂಗಳುಗಟ್ಟಲೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಪೊಲೀಸರಿಗೆ ತಿಳಿಸಿದೆ. ಈ ದಾಖಲೆಯಲ್ಲಿ ಗೋಸ್ವಾಮಿ ವಿರುದ್ಧ ಆರೋಪಿಸಲು ಪೊಲೀಸರಿಗೆ ಗಣನೀಯ ಅಂಶಗಳೇನೂ ಸಿಕ್ಕಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತನಿಖೆ ನಡೆಯುವ ತನಕ ಯಾವುದೇ ಬಲವಂತದ ಕ್ರಮದಿಂದ ಚಾರ್ಜ್ಶೀಟ್ನಲ್ಲಿ ಗೋಸ್ವಾಮಿ ಮತ್ತು ಇತರ ಎಆರ್ಜಿ ನೌಕರರನ್ನು ರಕ್ಷಿಸಬೇಕು ಎಂದು ಅರ್ಜಿದಾರರ ಪರ ವಕೀಲ ಅಶೋಕ್ ಮುಂಂಡರಗಿ ಹೈಕೋರ್ಟ್ಗೆ ಒತ್ತಾಯಿಸಿದ್ದರು.
ಈ ಪ್ರಕರಣದಲ್ಲಿ ಗೋಸ್ವಾಮಿಯನ್ನು ಕರೆಸಲು ಅಥವಾ ಬಂಧಿಸಲು ನಿರ್ಧರಿಸಿದರೆ ಮೂರು ದಿನಗಳ ಮುಂಚಿತವಾಗಿ ನೋಟಿಸ್ ನೀಡುವಂತೆ ನ್ಯಾಯಪೀಠ ಪೊಲೀಸರಿಗೆ ನಿರ್ದೇಶನ ನೀಡಿದ್ದರೆ, ಅರ್ಜಿಯಲ್ಲಿ ಹೆಸರಿಸದ ಹಲವಾರು ಉದ್ಯೋಗಿಗಳಿಗೆ ಅಂತಹ ಪರಿಹಾರ ನಿಡಲು ಆಗುವುದಿಲ್ಲ “ಆರೋಪಿ ಯಾರು ಮತ್ತು ಯಾರು ಅಲ್ಲ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ” ಎಂಬ ಕಾರಣದಿಂದ ತನಿಖೆಯನ್ನು ತಡೆಹಿಡಿಯಬೇಕೆಂದು ಮುಂಡರಗಿ ಅವರ ಮನವಿಯನ್ನು ಒಪ್ಪಿಕೊಳ್ಲಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದ ವಿಚಾರಣೆಯನ್ನು ಜೂನ್ 28ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ.