ಈವರೆಗೂ ಮುಖ್ಯಮಂತ್ರಿಯಿಂದ ಹಿಡಿದು ಸಚಿವರಾಗಿ, ಶಾಸಕರಾಗಿ ಆಡಳಿತ ನಡೆಸಿದವರು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಅನೈತಿಕ ವ್ಯವಹಾರ ನಡೆಸಿಲ್ಲ ಎಂಬುದನ್ನು ಮೊದಲು ಸಾಬೀತು ಪಡಿಸಲಿ ಎಂದು ಸುಧಾಕರ್ ಸವಾಲು ಹಾಕಿದರು. ಯಾರ್ಯಾರು ಸಿಎಂ ಆಗಿದ್ದಾಗ ಏನೇನು ಮಾಡಿದ್ದಾರೆಂಬುದು ತನಿಖೆಯಾಗಲಿ. ವಿಧಾನಸಭೆಯಲ್ಲಿರುವ 225 ಜನಪ್ರತಿನಿಧಿಗಳ ಬಗ್ಗೆಯೂ ತನಿಖೆ ಮಾಡಿಸಲಿ. ಯಾರ್ಯಾರು ಏನು ಮಾಡಿದ್ದಾರೆಂಬುದು ಜನರಿಗೆ ಗೊತ್ತಾಗಲಿ. ಇವರೆಲ್ಲ ಸತ್ಯ ಹರಿಶ್ಚಂದ್ರರಂತೆ ಈಗ ಮಾತನಾಡುತ್ತಿದ್ದಾರೆ. ತನಿಖೆ ನಡೆದರೆ ಎಲ್ಲವೂ ಗೊತ್ತಾಗಲಿದೆ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ಗೆ ಮಾಡಲು ಕೆಲಸವಿಲ್ಲ. ವೈಯಕ್ತಿಕ ಅಜೆಂಡಾಗಳನ್ನಿಟ್ಟುಕೊಂಡು ಸದನಕ್ಕೆ ಅಡ್ಡಿಪಡಿಸುತ್ತಿದೆ. ಈಗಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್ಐಟಿಗೆ ವಹಿಸಲಾಗಿದೆ. ನ್ಯಾಯಾಂಗದ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸುಧಾಕರ್ ತಿರುಗೇಟು ನೀಡಿದರು.