ಸಿನಿಮಾ, ಸಾಹಿತ್ಯ ಅಥವಾ ಇನ್ಯಾವುದೇ ಆಗಲಿ ಬೆಳಗಾವಿಯಲ್ಲಿ ನಡೆವ ಕನ್ನಡ ಕಾರ್ಯಕ್ರಮಗಳು ಸದಾ ವಿಶೇಷ.
ಬೆಳಗಾವಿಗೆ ನಟ ಪುನೀತ್ ರಾಜ್ಕುಮಾರ್ ಆಗಮಿಸಿದ್ದರು. ಈ ಗಡಿ ಜಿಲ್ಲೆಯಲ್ಲಿ ತಮ್ಮ ‘ಯುವರತ್ನ’ ಸಿನಿಮಾದ ಪ್ರಚಾರವನ್ನು ಪುನೀತ್ ನಡೆಸಿದರು.
ಬೆಳಗಾವಿಯ ಕ್ಯಾಂಪ್ ಏರಿಯಾದಲ್ಲಿರುವ ಚಂದನ್-ಐನ್ಯಾಕ್ಸ್ ಚಿತ್ರಮಂದಿರದ ಬಳಿ ಬಂದ ಪುನೀತ್ ಅವರನ್ನು ನೂರಾರು ಅಭಿಮಾನಿಗಳು ಸೇರಿದ್ದರು. ಘೋಷಣೆಗಳನ್ನು ಕೂಗಿ, ಕನ್ನಡ ಬಾವುಟಗಳ್ನು ಹಿಡಿದು ಪುನೀತ್ ಅವರನ್ನು ಜಿಲ್ಲೆಗೆ ಸ್ವಾಗತಿಸಿದರು.
ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಪುನೀತ್ ರಾಜ್ಕುಮಾರ್, ‘ಕುಂದಾ ನಗರಿ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನವರುಗಳ ಊರು ಬೆಳಗಾವಿಗೆ ಬರಲು ಸದಾ ಖುಷಿಯಾಗುತ್ತದೆ. ನಾವು ಬಂದ ಕೂಡಲೇ ಮಳೆ ಸಹ ಬಂದಿದ್ದು ಶುಭ ಸೂಚಕ’ ಎಂದರು.
‘ಯುವರತ್ನ’ ಸಿನಿಮಾದ ಕೆಲವು ಡೈಲಾಗ್ಗಳನ್ನು ಹೊಡೆದ ಅಪ್ಪು, ”ನಿಮಗಾಗಿ ಸಿನಿಮಾದಲ್ಲಿ ಸಾಕಷ್ಟು ಡಾನ್ಸ್ ಮಾಡಿದ್ದೇನೆ ಏಪ್ರಿಲ್ 1 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ ನೋಡಿ ಹರಸಿ” ಎಂದರು.
ಪುನೀತ್ ಅವರು ವೇದಿಕೆ ಏರುತ್ತಿದ್ದಂತೆ ಮಳೆ ಹನಿಗಳು ಉದುರಲು ಆರಂಭವಾದವು. ಅಭಿಮಾನಿಗಳು ಸಹ ಪುಷ್ಪವೃಷ್ಟಿ ಮಾಡಿದರು. ಅಪ್ಪು ಅವರು ‘ಹಾಲಿನ ಮಳೆಯೊ, ಜೇನಿನ ಹೊಳೆಯೊ’ ಹಾಡು ಹಾಡಿ ಸನ್ನಿವೇಶವನ್ನು ಇನ್ನಷ್ಟು ಭಾವುಕಗೊಳಿಸಿದರು.
‘ಯುವರತ್ನ’ ಸಿನಿಮಾವು ಏಪ್ರಿಲ್ 1 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪುನೀತ್ ರಾಜ್ಕುಮಾರ್ ಪಾಲ್ಗೊಂಡಿದ್ದು, ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಸ್ವತಃ ಭೇಟಿ ನೀಡಿ ಪ್ರಚಾರ ಮಾಡಲಿದ್ದಾರೆ. ಇಂದೇ ಕಲಬುರ್ಗಿಗೂ ಪುನೀತ್ ಹಾಗೂ ತಂಡ ಭೇಟಿ ನೀಡಿದೆ.
‘ಯುವರತ್ನ’ ಸಿನಿಮಾದಲ್ಲಿ ಪುನೀತ್ ಜೊತೆಗೆ ಸಾಯೆಷಾ ನಾಯಕಿಯಾಗಿ ನಟಿಸಿದ್ದಾರೆ. ಡಾಲಿ ಧನಂಜಯ್, ದಿಗಂತ್, ಪ್ರಕಾಶ್ ರೈ, ಅವಿನಾಶ್, ರವಿಶಂಕರ್, ಸೋನು ಗೌಡ, ರಂಗಾಯಣ ರಘು ಇನ್ನೂ ಹಲವರು ಖ್ಯಾತ ಕಲಾವಿದರು ನಟಿಸಿದ್ದಾರೆ. ಸಂತೋಶ್ ಆನಂದ್ ರಾಮ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ವಿಜಯ್ ಕಿರಗಂದೂರ್