ಬೆಳಗಾವಿ, ಮಾರ್ಚ್ 20: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಎಸ್ಐಟಿ ತಂಡ ಬೆಳಗಾವಿಗೆ ಆಗಮಿಸಿ, ಯುವತಿ ಕುಟುಂಬಸ್ಥರು ವಾಸವಿದ್ದ ಬಾಡಿಗೆ ಮನೆಗೆ ತೆರಳಿ ಮಾಹಿತಿ ಪಡೆದರು.
ಬಾಡಿಗೆ ಮನೆ ಮಾಲೀಕರಿಂದ ಯುವತಿ ಕುಟುಂಬದ ಬಗ್ಗೆ ಎಸ್ಐಟಿ ಅಧಿಕಾರಿ ಮಾಹಿತಿ ಪಡೆದಿದ್ದು, ಯುವತಿಯ ಕುಟುಂಬದ ಬಗ್ಗೆ ಗೊತ್ತಿರುವ ಮಾಹಿತಿಯನ್ನು ಮನೆ ಮಾಲೀಕರು ಹೇಳಿದ್ದಾರೆ ಎನ್ನಲಾಗಿದೆ. ಮಗಳು ಕಿಡ್ನಾಪ್ ಆಗಿದ್ದಾಳೆಂದು ಯುವತಿಯ ತಂದೆ ದೂರು ನೀಡಿದ್ದರು.
ಮಾರ್ಚ್ 16ರಂದು ಬೆಳಗಾವಿ ನಗರದ ಎಪಿಎಂಸಿ ಠಾಣೆಗೆ ಯುವತಿಯ ತಂದೆ ದೂರು ನೀಡಿದ್ದು, ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿತ್ತು. ಪ್ರಕರಣದ ಪ್ರಾಥಮಿಕ ತನಿಖೆ ಮಾಡಿ ಬೆಂಗಳೂರಿನ ಆರ್.ಟಿ ನಗರ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ.
ಯುವತಿ ಕುಟುಂಬದವರು ಎಷ್ಟು ದಿನದಿಂದ ವಾಸವಿದ್ದರು, ಮನೆಗೆ ಯಾರ್ಯಾರು ಬರುತ್ತಿದ್ದರು, ಯುವತಿ ಏನಾದರೂ ಬೆಳಗಾವಿಯ ಮನೆಗೆ ಬಂದಿದ್ದಳಾ. ಕೊನೆಯದಾಗಿ ಭೇಟಿಯಾಗಿ ಏನು ಹೇಳಿ ಹೋಗಿದ್ದಾರೆ ಎಂಬ ಮಾಹಿತಿಯನ್ನು ಎಸ್ಐಟಿ ಅಧಿಕಾರಿ ಪಡೆದಿದ್ದಾರೆ.
ಸಿಡಿ ಯುವತಿಯ ಕುಟುಂಬಸ್ಥರು ದೂರು ನೀಡಿದ ದಿನದಿಂದ ನಿಗೂಢ ಸ್ಥಳದಲ್ಲಿದ್ದು, ಇಂದು ಎಸ್ ಐಟಿ ಅಧಿಕಾರಿಗಳಿಂದ ಯುವತಿ ಕುಟುಂಬಸ್ಥರ ವಿಚಾರಣೆ ಸಾಧ್ಯತೆ ಇದೆ. ಬೆಳಗಾವಿ ಎಪಿಎಂಸಿ ಸಿಪಿಐ ಕೂಡ ಈ ತಂಡದಲ್ಲಿ ಭಾಗಿಯಾಗಿ ತನಿಖೆ ನಡೆಸುತ್ತಿದ್ದಾರೆ.