ಚಿತ್ರದುರ್ಗ: ಮನೆಗಳ್ಳತನ ಮಾಡಿದ ಖದೀಮರು ಪೊಲೀಸರ ಮನೆ ಎಂದು ತಿಳಿದು ಕದ್ದ ವಸ್ತುಗಳನ್ನು ವಾಪಾಸ್ ಬಿಟ್ಟು ಹೋಗಿರುವ ಘಟನೆ ಚಿತ್ರದುರ್ಗದ ಬಸವೇಶ್ವರ ನಗರದಲ್ಲಿ ನಡೆದಿದೆ.
ಮಾರ್ಚ್ 13ರ ರಾತ್ರಿ ಎಸ್ಪಿ ಕಚೇರಿಯ ಸಿಪಿಐ ಮೃತ್ಯುಂಜಯ ಅವರ ಮನೆಗೆ ಕನ್ನ ಹಾಕಿದ ಕಳ್ಳರು ಮನೆಯಲ್ಲಿದ್ದ ₹88 ಸಾವಿರ ಮೌಲ್ಯದ ಪಿಸ್ತೂಲ್, ₹7 ಲಕ್ಷ ಮೌಲ್ಯದ 266 ಗ್ರಾಂ ಬಂಗಾರ, ₹1.27 ಲಕ್ಷ ಮೌಲ್ಯದ 2 ಕೆಜಿ 450 ಗ್ರಾಂ ತೂಕದ ಬೆಳ್ಳಿ, 60 ಸಾವಿರ ನಗದು, ₹12 ಲಕ್ಷ ಮೌಲ್ಯದ ಕಾರು ಕದ್ದು ಪರಾರಿಯಾಗಿದ್ದರು.
ಈ ಸಂಬಂಧ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾರಿನಲ್ಲಿದ್ದ ಲಾಠಿ, ಪೊಲೀಸ್ ಐಡಿ ಕಾರ್ಡ್ ನೋಡಿ ಬೆಚ್ಚಿಬಿದ್ದ ಕಳ್ಳರು ದೂರು ದಾಖಲಾದ 12 ಗಂಟೆಯೊಳಗೆ ಪಿಸ್ತೂಲ್, ಬೆಳ್ಳಿ ವಾಪಸ್ ಬಿಟ್ಟು ಹೋಗಿದ್ದಾರೆ. ಅಲ್ಲದೇ ಕಾರನ್ನು ಅಜ್ಞಾತ ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ. ಇತ್ತ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.