ಬೆಂಗಳೂರು: ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಚಿವರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹತ್ವದ ಅನೌಪಚಾರಿಕ ಸಭೆ ನಡೆಸಿದರು.
ಸಂಪುಟ ಸಭೆಯಲ್ಲಿ ಚರ್ಚಿಸುವ ಹೊರತಾಗಿ ಇತರ ಪ್ರಾಮುಖ್ಯ ವಿಚಾರಗಳನ್ನು ತುರ್ತಾಗಿ ಚರ್ಚಿಸುವ ಉದ್ದೇಶದಿಂದ ಸಭೆ ಕರೆದಿದ್ದರು ಎಂದು ಮೂಲಗಳು ತಿಳಿಸಿದೆ.
ಈವರೆಗೂ ಸರ್ಕಾರದ ಕಡೆಯಿಂದ ಸಭೆಯ ಅಧಿಕೃತ ಮಾಹಿತಿ ಹೊರಬಂದಿಲ್ಲ. ಸದನದಲ್ಲಿ ಸಚಿವರ ನಡವಳಿಕೆಗಳ ಕುರಿತು ಸಿಎಂ ಬುದ್ಧಿವಾದ ಹೇಳಿದರೆ ಎಂದು ತಿಳಿದುಬಂದಿದೆ.
ಕಲಾಪದಲ್ಲಿ ಪ್ರತಿಪಕ್ಷದಿಂದ ದಾಳಿ ನಡೆಯುವಾಗ ಸದನದಲ್ಲಿ ಒಂದಿಬ್ಬರು ನಿಂತರೇ ಸಾಲದು, ಎಲ್ಲರೂ ನಿಂತು ಮಾತನಾಡಬೇಕು ಎಂದು ಸಿಎಂ ತಾಕೀತು ಮಾಡಿದರೆನ್ನಲಾಗಿದೆ.
ಸಿಡಿ ಸೇರಿದಂತೆ ಮತ್ತಿತರ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ನವರು ಸರ್ಕಾರದ ವಿರುದ್ಧ ಮುಗಿಬೀಳುತ್ತಿದ್ದಾರೆ. ಕಾಂಗ್ರೆಸ್ನವರ ಈ ದಾಳಿ
ತಡೆಯಲು ಎಲ್ಲರೂ ಸಜ್ಜಾಗಬೇಕು. ಅವರ ಅವಧಿ ವಿಚಾರವನ್ನೂ ಪ್ರಸ್ತಾಪಿಸಬೇಕೆಂದು ಸಲಹೆ ನೀಡಿದ್ದಾರೆ.
ಇಂತಹ ಸಂದರ್ಭದಲ್ಲಿ ಒಂದಿಬ್ಬರು ನಿಂತು ಮಾತಾಡಿದರೆ ಸಾಲದು. ಉಳಿದ ಸಚಿವರು ಕೂಡ ಸದನದಲ್ಲಿ ನಿಂತು ಮಾತನಾಡಬೇಕು. ಸರ್ಕಾರದ ಆಡಳಿತ ಹಾಗೂ ತೀರ್ಮಾನನ್ನು ಸಮರ್ಥನೆ ಮಾಡಿಕೊಳ್ಳಬೇಕು. ಬಜೆಟ್ ಮೇಲಿನ ಚರ್ಚೆ ವೇಳೆ ಸಮಗ್ರವಾಗಿ ಉತ್ತರ ನೀಡಬೇಕು. ತಮ್ಮ ತಮ್ಮ ಇಲಾಖೆಗಳ ಪ್ರಗತಿ ಬಗ್ಗೆ ಸಮಗ್ರವಾದ ಮಾಹಿತಿ ಮೂಲಕ ಉತ್ತರಿಸಬೇಕು. ಯಾವುದೇ ಕಾರಣಕ್ಕೂ ವಿಪಕ್ಷಗಳ ದಾಳಿಗೆ ಒಳಗಾಗಬಾರದು ಎಂದು ಸಲಹೆ ನೀಡಿದ್ದಾರೆ.
ಸದನ ಮುಗಿದ ನಂತರ ಜಿಲ್ಲಾ ಪ್ರವಾಸ ಮಾಡಬೇಕು. ಜಿಲ್ಲೆಯಲ್ಲಿ ಕೆಡಿಪಿ ಸಭೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಮಾಡಿಸಬೇಕು. ಸ್ಥಳೀಯ ಶಾಸಕರ ವಿಶ್ವಾಸದೊಂದಿಗೆ ಜಿಲ್ಲೆಯ ಅಭಿವೃದ್ಧಿ ಮಾಡಬೇಕು ಎಂದು ತಿಳಿ ಹೇಳಿದ್ದಾರೆ.
ಶೀಘ್ರವೇ ಉಪ ಚುನಾವಣೆ ದಿನಾಂಕ ಘೋಷಣೆ ಯಾಗುತ್ತಿದೆ. ಈ ಚುನಾವಣೆಯಲ್ಲಿ ನಾವು ಗೆಲ್ಲಲೇಬೇಕು. ಹೀಗಾಗಿ ಚುನಾವಣಾ ಉಸ್ತುವಾರಿ ಹೊತ್ತವರು ಚುನಾವಣೆ ಸಿದ್ದತೆ ಕಡೆ ಗಮನ ಕೊಡಬೇಕು. ಜಿಲ್ಲೆಯಲ್ಲಿ ಆಡಳಿತ ವನ್ನು ಚುರುಕುಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲರು ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.
Laxmi News 24×7