ಸುಬ್ರಹ್ಮಣ್ಯ: ‘ತಾನು ಏನು ಮಾತನಾಡುತ್ತಿದ್ದೇನೆ ಎನ್ನುವ ಅರಿವಿಲ್ಲದೇ ಮಾತನಾಡುವ ದೇಶದ ಒಬ್ಬನೇ ರಾಜಕಾರಣಿ ರಾಹುಲ್ ಗಾಂಧಿ’ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಟೀಕಿಸಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಶನಿವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಆರ್ಎಸ್ಎಸ್ ನೇತೃತ್ವದ ಶಾಲೆಗಳು ಪಾಕಿಸ್ತಾನದ ಮದರಸಾಗಳಿಗೆ ಸಮ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಆರ್ಎಸ್ಎಸ್ ಏನು ಎಂದು ಅರಿಯಲು ಅದರ ಒಳಗನ್ನು ತಿಳಿಯಬೇಕು’ ಎಂದರು.
‘ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಒಂದು ದೇಶ ಒಂದು ಚುನಾವಣೆ’ ಅನುಷ್ಠಾನಕ್ಕೆ ಮುಂದಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದರಲ್ಲೂ ಆರ್ಎಸ್ಎಸ್ ಕೈವಾಡ ಹುಡುಕುತ್ತಿದ್ದಾರೆ’ ಎಂದು ಟೀಕಿಸಿದರು.
ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ಕಾಲೇಜು ಇಲ್ಲದ ಕಾರಣ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗಿದೆ. ಕೆಲವರು ಕೆಲಸಕ್ಕೆ ಸೇರಿದರೆ, ಇನ್ನು ಕೆಲವರು ಬಾಲ್ಯವಿವಾಹವಾಗಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಈ ವಿದ್ಯಾರ್ಥಿಗಳನ್ನು ಮತ್ತೆ ಕಾಲೇಜಿಗೆ ತರುವ ಪ್ರಯತ್ನ ನಡೆಯುತ್ತಿದೆ. 1ರಿಂದ 6ನೇ ತರಗತಿಗೆ ಶಾಲೆ ಪ್ರಾರಂಭಿಸುವ ಸಂಬಂಧ ಶಿಕ್ಷಣ ಇಲಾಖೆ ತಜ್ಞರ ಸಲಹೆ ಪಡೆದು ನಿರ್ಧರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.