ಬೆಂಗಳೂರು,ಮಾ.1- ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳದ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು. ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ಇವರಿಗೆ ಪಿಂಚಣಿ ಮತ್ತು ವೈದ್ಯಕೀಯ ಸವಲತ್ತನ್ನು ಕೂಡಲೇ ಜಾರಿಗೆ ತರಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿ.ಆರ್.ಶಿವಶಂಕರ್, ಬಿ.ನಾಗರತ್ನ ಒತ್ತಾಯಿಸಿದರು.
ನಿವೃತ್ತ ಕಾರ್ಯಕರ್ತೆಯರಿಗೆ ಹಿಂದೆ ನೀಡುತ್ತಿದ್ದ ಇಡಿಗಂಟನ್ನು ನಿಲ್ಲಿಸಲಾಗಿದೆ. ಅವರಿಗೆ ನಿವೃತ್ತ ವೇತನವನ್ನೂ ನೀಡುತ್ತಿಲ್ಲ. ಈ ಕೂಡಲೇ ಕನಿಷ್ಠ ವೇತನ ನೀಡಬೇಕೆಂದು ಆಗ್ರಹಿಸಿದರು. ಮಾತೃಪೂರ್ಣ ಯೋಜನೆಯ ಬಗ್ಗೆ ಸರ್ಕಾರ ಸಮಗ್ರವಾಗಿ ಅಧ್ಯಯನ ನಡೆಸಿ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಫಲಾನುಭವಿಗಳ ಹಿತದೃಷ್ಟಿಯಿಂದ ಹಾಲಿ ಚಾಲ್ತಿಯಲ್ಲಿದ್ದ ಪೌಷ್ಠಿಕ ಆಹಾರವನ್ನು ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸಬೇಕು ಅಥವಾ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಬೇಕೆಂದು ಒತ್ತಾಯಿಸಿದರು.