ಬೆಂಗಳೂರು: ಕರ್ನಾಟಕದ ಬಿಜೆಪಿ ನಾಯಕರು ಈಗ ವಿಧಾನಸಭೆ ಚುನಾವಣೆ ಏರ್ಪಡುವ ದಕ್ಷಿಣದ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚುನಾವಣಾ ರ್ಯಾಲಿಗಳಿಗೆ ಕಾರ್ಯತಂತ್ರ ರೂಪಿಸುವುದರಿಂದ ಹಿಡಿದು ಸೀಟು ಹಂಚಿಕೆ, ರ್ಯಾಲಿಗಳನ್ನು ಆಯೋಜಿಸುವ ಬಗ್ಗೆ ಮತ್ತು ಸಾರ್ವಜನಿಕ ಸಮಾವೇಶಗಳನ್ನು ನಿಗದಿಪಡಿಸುವ ಕುರಿತು ಪಕ್ಷದಲ್ಲಿ ಕಾರ್ಯನಿರತರಾಗಿದ್ದಾರೆ.
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರ್ಕಾರದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹರಿಹಾಯುತ್ತಿದ್ದರೆ, ತಮಿಳು ನಾಡಿನ ವಿಧಾನ ಸಭೆ ಚುನಾವಣೆಯ ಪ್ರಚಾರದ ಉಸ್ತುವಾರಿಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯವರು ವಹಿಸಿಕೊಂಡಿದ್ದಾರೆ. ಅವರು ಅಲ್ಲಿ ಎಐಎಡಿಎಂಕೆ ಜೊತೆ ಸೀಟು ಹಂಚಿಕೆ ಕುರಿತು ಚರ್ಚಿಸುತ್ತಿದ್ದಾರೆ. ತಮಿಳು ನಾಡು ಮತ್ತು ಕೇರಳ ಹಾಗೂ ಪುದುಚೆರಿಯಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಈ ಬಾರಿಯ ಚುನಾವಣೆಯಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.
ಕರ್ನಾಟಕದವರಾದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಧ್ಯಮ ಉಸ್ತುವಾರಿ ಮತ್ತು ಚುನಾವಣಾ ಪ್ರಚಾರದ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು ಪುದುಚೆರಿಯಲ್ಲಿ ಚುನಾವಣೆಯ ಸಹ ಉಸ್ತುವಾರಿಯಾಗಿದ್ದಾರೆ. ತಮ್ಮ ಸಾಮರ್ಥ್ಯ ವ್ಯಾಪ್ತಿಯಲ್ಲಿ ಹೆಚ್ಚು ಜನರನ್ನು ತಲುಪಲು ನೋಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ ನಾರಾಯಣ ಅವರು ಬಿಜೆಪಿಯ ಕೆಲವು ಹಿರಿಯ ಶಾಸಕರೊಂದಿಗೆ ಕೇಡರ್ ಮಟ್ಟದಲ್ಲಿ ಮತ್ತು ಕೇರಳದಲ್ಲಿ ಮೂಲ ನೆಲೆಯನ್ನು ಉತ್ತೇಜಿಸಲು ನೋಡುತ್ತಿದ್ದಾರೆ.
ನಿನ್ನೆ ಸಿ ಟಿ ರವಿಯವರು ತಮಿಳು ನಾಡಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಚಿನ್ನದ ಕಳ್ಳಸಾಗಣೆ ಕೇಸಿನಲ್ಲಿ ಕೇರಳದಲ್ಲಿ ಪ್ರಹ್ಲಾದ್ ಜೋಷಿಯವರು ಪಿಣರಾಯಿ ವಿಜಯನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ, ಉಪ ಮುಖ್ಯಮಂತ್ರಿ ಅಶ್ವಥ ನಾರಾಯಣ ನಗರದಲ್ಲಿರುವ ಕೇರಳಿಗರನ್ನು ಭೇಟಿ ಮಾಡಿ ಅವರಿಗೆ ಹತ್ತಿರವಾಗಲು ನೋಡುತ್ತಿದ್ದಾರೆ.