ನವದೆಹಲಿ : ನಮ್ಮ ಸಂಸ್ಕೃತಿಯ ಪ್ರತಿರೂಪದಂತಿರುವ ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಆಟಿಕೆ ಕ್ಲಸ್ಟರ್ ನಮ್ಮ ದೇಶಕ್ಕೆ ಮಾತ್ರ ಸೀಮಿತಗೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ .
ಶನಿವಾರ ದೆಹಲಿಯಲ್ಲಿ ವರ್ಚುವಲ್ ಕಾನ್ಸರೆನ್ಸ್ ಮೂಲಕ ಆಟಿಕೆ ಮೇಳಕ್ಕೆ ಚಾಲನೆ ನೀಡಿ, ಚನ್ನಪಟ್ಟಣದ ಆಟಿಕೆ ತಯಾರಕರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು,ಚನ್ನಪಟ್ಟಣದ ಬೊಂಬೆಯನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಿಗೆ ತರಲು ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕು. ಆಟಿಕೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಜಗತ್ತಿನ ಎಲ್ಲಾ ಮಕ್ಕಳ ಮೊಗದಲ್ಲಿ ನಗು ತರಬೇಕು ಎಂದು ಹೇಳಿದರು .
ಸ್ವದೇಶಿ ಆಟಿಕೆಗಳನ್ನು ಜಗತ್ತಿನ ಮಟ್ಟದಲ್ಲಿ ಕೊಂಡೊಯ್ದು ಪ್ರದರ್ಶಿಸುವುದು ಮಾತ್ರವಲ್ಲದೆ, ಜಗತ್ತಿನ ಎಲ್ಲ ಮಕ್ಕಳ ಮೊಗದಲ್ಲಿ ಈ ಆಟಿಕೆಗಳ ಮೂಲಕ ನಗು ತರುವಂತೆ ಮಾಡಬೇಕು. ಇದಕ್ಕೆ ಬೇಕಾದ ಸಹಕಾರವನ್ನು ಸರ್ಕಾರ ಸಹ ನೀಡುತ್ತದೆ ಎಂದರು.
ಅಷ್ಟೇ ಅಲ್ಲದೆ, ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಐಟಿ ವೃತ್ತಿಪರರ ಮೂಲಕ ಚನ್ನಪಟ್ಟಣದ ಬೊಂಬೆ ತಯಾರಕರಿಗೆ ಕಾರ್ಯಾಗಾರ ಏರ್ಪಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಮೋದಿ ಹೇಳಿದರು .