ಬೆಂಗಳೂರು : ಕೇವಲ ಎರಡು ತಿಂಗಳುಗಳ ಅಂತರದಲ್ಲಿ ಅಡುಗೆ ಅನಿಲ ದರ ಸುಮಾರು 200 ರೂ. ಹೆಚ್ಚಳವಾಗಿದೆ. ಮತ್ತೂಂದೆಡೆ ಕೊರೊನಾ ಹಾವಳಿಯಿಂದಾಗಿ ಸಬ್ಸಿಡಿಯನ್ನೂ ಸರಕಾರ ಹಿಂಪಡೆದಿದ್ದು, ಅವಳಿ ಆಘಾತ ನೀಡಿದೆ.
ಒಟ್ಟು 200 ರೂ. ಹೆಚ್ಚಳದಲ್ಲಿ ಫೆಬ್ರವರಿ ತಿಂಗಳಲ್ಲೇ 100 ರೂ. ಏರಿಕೆ ಆಗಿದೆ. ಡಿಸೆಂಬರ್ನಲ್ಲಿ ಕೂಡ 100 ರೂ. ಹೆಚ್ಚಳ ಆಗಿತ್ತು. ಈ ಮಧ್ಯೆ ಗ್ರಾಹಕರ ಖಾತೆಗೆ ನೇರವಾಗಿ ಬರುತ್ತಿದ್ದ ಸಬ್ಸಿಡಿ ಕೂಡ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದೆ.
ಫೆ. 4ರಂದು 25 ರೂ., ಫೆ. 15ರಂದು 50 ರೂ. ಮತ್ತು ಫೆ. 25ರಂದು 25 ರೂ.ಗಳಂತೆ ಒಟ್ಟು ಮೂರು ಬಾರಿ ದರ ಏರಿಕೆ ಆಗಿದೆ. ಜನವರಿಯಲ್ಲಿ ವ್ಯತ್ಯಾಸ ಆಗಿರಲಿಲ್ಲ. ಡಿ. 15ರಂದು ಅಡುಗೆ ಅನಿಲ (14.2 ಕೆ.ಜಿ.) ಒಮ್ಮೆಗೆ 100 ರೂ. ಏರಿಕೆ ಕಂಡಿತ್ತು. ಪ್ರಸ್ತುತ ಸಿಲಿಂಡರ್ ದರ 797 ರೂ. (ಬೆಂಗಳೂರು) ಇದೆ.
ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಿಲಿಂಡರ್ (19.2 ಕೆ.ಜಿ.) ದರ ಕೂಡ ಇದೇ ಅವಧಿಯಲ್ಲಿ ಹೆಚ್ಚಳ ಆಗಿದ್ದು, ಇದರಿಂದ ಪರೋಕ್ಷವಾಗಿ ಗ್ರಾಹಕರ ಮೇಲೆ ಹೊರೆ ಬೀಳಲಿದೆ.
ವಾಣಿಜ್ಯ ಸಿಲಿಂಡರ್ಗಳ ದರ ಪ್ರಸ್ತುತ 1,570.5 ರೂ. ಇದೆ. ಕಳೆದ ತಿಂಗಳು 1,375 ರೂ. ಇತ್ತು. ಫೆ. 4ರಂದು 1,584.5 ರೂ. ಆಗಿತ್ತು. ಫೆ. 15ರಂದು 9.30 ರೂ. ಕಡಿಮೆಯಾಗಿ 1,575 ರೂ. ಆಯಿತು. ಫೆ. 25ರಂದು 4.5 ರೂ. ಕಡಿಮೆಯಾಗಿದೆ. ಈ ಸಿಲಿಂಡರ್ಗಳನ್ನು ಸಾಮಾನ್ಯವಾಗಿ ಹೊಟೇಲ್ ಉದ್ಯಮದಲ್ಲಿ ಬಳಸಲಾಗುತ್ತದೆ. ಈ ಹೊರೆಯನ್ನು ಹೊಟೇಲ್ ಮಾಲಕರು ಗ್ರಾಹಕರ ಮೇಲೆ ಹೊರಿಸುತ್ತಾರೆ.
ಇಂದು ಭಾರತ ಬಂದ್
ಜಿಎಸ್ಟಿ ಮತ್ತು ತೈಲ ದರ ಏರಿಕೆ ವಿರೋಧಿಸಿ ಶುಕ್ರವಾರ ದೇಶಾದ್ಯಂತ ಎಲ್ಲ ವಾಣಿಜ್ಯ ಅಂಗಡಿಗಳ ಮಾಲಕರು ಭಾರತ ಬಂದ್ ನಡೆಸಲಿದ್ದಾರೆ. ವ್ಯಾಪಾರಿಗಳ ಒಕ್ಕೂಟ ಕಾನ್ಫೆಡರೇಷನ್ ಆಫ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಈ ಬಂದ್ಗೆ ಕರೆ ನೀಡಿದ್ದು, ದೇಶದ 1,500 ಕಡೆಗಳಲ್ಲಿ ಬಂದ್ ಆಚರಿಸಲಾಗುತ್ತದೆ. ಜತೆಗೆ ರಸ್ತೆ ತಡೆಯನ್ನೂ ನಡೆಸಲಾಗುತ್ತದೆ ಎಂದು ವರ್ತಕರು ಹೇಳಿದ್ದಾರೆ.