ಬೆಂಗಳೂರು, ಫೆ. 23: ಚಿಕ್ಕಬಳ್ಳಾಪುರ ಸ್ಪೋಟ ಘಟನೆ ಕುರಿತು ಸಿಎಂ ಯಡಿಯೂರಪ್ಪ ಅವರ, ನಾವು ನೀವು ಏನ್ ಮಾಡೋಕೆ ಆಗುತ್ತೆ ರೀ..? ನಮ್ಮ ಜಾಗದಲ್ಲಿ ನೀವು ಇದ್ದರೆ ನೀವು ಏನ್ ಮಾಡ್ತಿದ್ರಿ ಹೇಳಿ..? ಬೆಳಗಿನ ಜಾವ ಹೋಗಿ ಅದನ್ನೆಲ್ಲಾ ಮಾಡಿ ಅಂತಾ ನಾವು ಅವರಿಗೆ ಹೇಳಿದ್ವಾ..? ಎಂಬ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪದೇ ಪದೆ ಇಂತಹ ಘಟನೆಗಳಿಗೆ ಯಾರು ಹೊಣೆ ಎಂದು ನಾವು ಕೇಳುತ್ತಿದ್ದೇವೆ? ಈ ಬಗ್ಗೆ ಸಿಎಂ ಹೇಳಬೇಕು. ಆದರೆ, ಅವರು ಯಾರೇನು ಮಾಡಲಿಕ್ಕಾಗುತ್ತದೆ ಎಂದಿದ್ದಾರೆ. ನಿಮ್ಮ ಕೈಯಲ್ಲಿ ಏನೂ ಮಾಡಲಿಕ್ಕಾಗದಿದ್ದರೆ, ದಯವಿಟ್ಟು ಅಧಿಕಾರ ತ್ಯಾಗ ಮಾಡಿ. ಎಲ್ಲರೂ ಜನರ ಮುಂದೆ ಹೋಗೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಬೆಳಗ್ಗೆ ಬೆಂಗಳೂರಿನಲ್ಲಿ ಚಿಕ್ಕಬಳ್ಳಾಪುರ ಸ್ಪೋಟ ದುರ್ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಟ್ಟಿದ್ದ ಸಿಎಂ ಯಡಿಯೂರಪ್ಪ ಮೇಲಿನಂತೆ ಹೇಳಿಕೆ ನೀಡಿದ್ದರು. ಸಿಎಂ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಹಿಂದೆಯೇ ನೋಟೀಸ್ ಕೊಡಲಾಗಿದೆ
ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗಿರುವ ಮಾಹಿತಿ ಪ್ರಕಾರ, ಉಪ ಆಯುಕ್ತರು ಕಲ್ಲು ಗಣಿಗಾರಿಕೆ ಮಾಡದಂತೆ ಈ ಹಿಂದೆಯೆ ನೋಟೀಸ್ ಕೊಟ್ಟಿದ್ದರು. ಆದರೂ ಅಕ್ರಮ ನಿಲ್ಲಿಸದೇ ಗಣಿಗಾರಿಕೆ ಮುಂದುವರೆಸಲಾಗಿದೆ. ಗಣಿಗಾರಿಕೆಯಲ್ಲಿ ತೊಂದರೆ ಇದ್ದಾಗ ಮಾತ್ರ ನೋಟೀಸ್ ಕೊಟ್ಟಿರುತ್ತಾರೆ. ಇಡೀ ಪ್ರಕರಣದ ಬಗ್ಗೆ ಸರ್ಕಾರಕ್ಕೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಚೇರಿಯಿಂದ ಮಾಹಿತಿ ಕೇಳಲಾಗುತ್ತದೆ. ನಾನು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಜವಾಬ್ದಾರಿಯಿಲ್ಲದ ಸರ್ಕಾರ
ಸರ್ಕಾರ ಇಂತಹ ವಿಚಾರದಲ್ಲಿ ಜವಾಬ್ದಾರಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ತತ್ಪರಿಣಾಮ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಇಡುವುದಕ್ಕಾಗಿಯೇ ವಿರೋಧ ಪಕ್ಷ ಇದೆ. ಜನರಿಗೆ ರಕ್ಷಣೆ ನೀಡುವುದು ವಿರೋಧ ಪಕ್ಷದ ಕರ್ತವ್ಯ. ನಾವು ಅದನ್ನು ಮಾಡುತ್ತಿದ್ದೇವೆ. ಸಚಿವ ಡಾ. ಸುಧಾಕರ್ ಅವರು ಇಂತಹ ಹೇಳಿಕೆಯನ್ನಲ್ಲದೇ ಬೇರೇನು ಹೇಳಲು ಸಾಧ್ಯ? ಎಂದು ಡಿಕೆಶಿ ಡಾ. ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.