ಬೆಂಗಳೂರು (ಫೆಬ್ರವರಿ 24): ಆಂಧ್ರ ಮತ್ತು ಪಂಜಾಬ್ ಹೊರತುಪಡಿಸಿದರೆ ಆರನೇ ತರಗತಿಯಿಂದ ಶಾಲೆ ಆರಂಭ ಮಾಡಿರುವುದು ನಮ್ಮ ರಾಜ್ಯ ಮಾತ್ರ. ನಾವು ಎಲ್ಲರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಇನ್ನೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಒಂದನೇ ತರಗತಿಯಿಂದ ಶಾಲೆ ಆರಂಭಿಸಲೂ ಚಿಂತನೆ ನಡೆಸಿದ್ದೇವೆ. ಹಾಗೆಯೇ ಮಕ್ಕಳ ಮತ್ತು ಶಾಲೆಗಳ ಹಿತದೃಷ್ಟಿಯಿಂದ ಶಾಲಾ ದಾಖಲಾತಿ ಸಮಯವನ್ನೂ ವಿಸ್ತರಿಸಲಾಗಿದೆ. ಇದೆಲ್ಲವನ್ನೂ ನಮ್ಮ ಆಡಳಿತ ಮಂಡಳಿಗಳೂ ಗಮನಿಸಬೇಕಿದೆ ಎಂದೂ ಸುರೇಶ್ ಕುಮಾರ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಶುಲ್ಕದ ಬಗ್ಗೆಯೂ ಮಾತನಾಡಿರುವ ಸಚಿವರು, “ನಾನಂತೂ ಯಾವುದೇ ರೀತಿಯ ಮಾತುಕತೆಗೆ ಮುಕ್ತನಾಗಿದ್ದೇನೆ. ಆದರೆ ನೀವು ಮಕ್ಕಳ ಹಿತದೃಷ್ಟಿಯಿಂದ ಪೋಷಕರೊಂದಿಗೆ ಮಾತನಾಡಿಕೊಂಡು ಸೂತ್ರವೊಂದನ್ನು ತಂದರೆ ನಾನಂತೂ ಎಲ್ಲರಿಗೂ ಹಿತವಾಗುವಂತಹ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಆರ್ಥಿಕವಾಗಿ ಜರ್ಝರಿತವಾಗಿರುವ ಪೋಷಕರ ಹಿತ ಮತ್ತು ನಮ್ಮ ಶಿಕ್ಷಕರ ಹಿತಗಳೂ ಮುಖ್ಯವಾಗಬೇಕಿದೆ. ನಮ್ಮ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಬೇಕೆಂಬುದು ನಮ್ಮ ಹಾಗೂ ನಿಮ್ಮ ಉದ್ದೇಶವಾಗಿದೆ. ಅದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯೋಣ ” ಎಂದು ಅಭಿಪ್ರಾಯಪಟ್ಟಿದ್ದಾರೆ.