ಗದಗ: ದೂರದ ಉತ್ತರಾಖಂಡ್ ರಾಜ್ಯದಲ್ಲಿ ಸಿಲುಕಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದ ಕನ್ನಡಿಗ ಕೆಂಚಪ್ಪ ಮತ್ತೆ ತಾಯಿ ನಾಡಿಗೆ ಮರಳುವ ಕನಸು ಕೂಡಾ ಕಾಣದಂತಹ ಪರಿಸ್ಥಿತಿಯಲ್ಲಿದ್ದರು. ಆದ್ರೆ, ಕನ್ನಡಿಗ ಯೋಧರು ಆತನನ್ನು ಕಾಪಾಡಿ, ಮರಳಿ ತಾಯಿನಾಡಿಗೆ ಕರೆದುಕೊಂಡು ಬಂದಿದ್ದಾರೆ. ಯೋಧರ ಸಮಾಜಮುಖಿ ಕೆಲಸದಿಂದ ಅವರು ತಮ್ಮವರನ್ನು ಸೇರಿಕೊಂಡಿದ್ದಾರೆ. ಕೆಂಚಪ್ಪನಿಗೆ ತಾಯಿನಾಡಿಗೆ ಬಂದ ಸಂತಸವಾದರೆ, ಇನ್ನೊಂದೆಡೆ ವೀರ ಯೋಧರಿಗೆ ಮುಪ್ಪಿನ ವಯಸ್ಸಿನ ಹಿರಿಯ ಜೀವನ್ನು ಸಂಬಂಧಿಕರ ಹತ್ತಿರ ಸೇರಿಸಿರುವ ಸಂತೃಪ್ತಿ ಸಿಕ್ಕಿದೆ.
ಗದಗ ನಗರದ ನಿವಾಸಿಯಾದ ಶರಣಬಸವ ರಾಗಾಪೂರ ಎನ್ನುವವರು ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಉತ್ತರಾಖಂಡದಲ್ಲಿ ಸೇವೆ ಸಲ್ಲಿಸುವಾಗ ಚಾಲ್ತಿ ಎನ್ನುವ ಪುಟ್ಟ ಊರಿನ ಹೋಟೆಲ್ವೊಂದರಲ್ಲಿ ಕನ್ನಡಿಗ ಕೆಂಚಪ್ಪ ವಡ್ಡರ್ ಎನ್ನುವ ಹಿರಿಯ ಜೀವ ಕಣ್ಣಿಗೆ ಬಿಳುತ್ತಾರೆ. ಕೆಂಚಪ್ಪ ಅವರನ್ನು ವಿಚಾರಣೆ ಮಾಡಿದಾಗ, ಅವರು ಕನ್ನಡಿಗರಾಗಿದ್ದು, ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಎಂಬುದು ಗೊತ್ತಾಗುತ್ತದೆ. ಹೊಟೇಲ್ ಮಾಲೀಕರು ಕಿರುಕುಳ ನೀಡುತ್ತಿರುವ ವಿಷಯವೂ ಗೊತ್ತಾಗುತ್ತದೆ. ಅಗ ಊರಿಗೆ ಹೋಗೋಣ ಎಂದು ಆ ವೃದ್ಧನನ್ನು ಕೇಳುತ್ತಾರೆ. ಆದ್ರೆ ಮೊದಲು ಹೋಟೆಲ್ ಮಾಲೀಕರಿಗೆ ಹೆದರಿ ಬರಲು ಕೆಂಚಪ್ಪ ನಿರಾಕರಣೆ ಮಾಡುತ್ತಾರೆ.ಬಳಿಕ ಶರಣಬಸವ ಅವರು ತಮ್ಮ ಸಹೋದ್ಯೋಗಿ ರಿಯಾಜ್ ಜೊತೆ ರಜೆಗೆ ಕರ್ನಾಟಕಕ್ಕೆ ಹೊರಡುವ ಮುನ್ನ ಕೆಂಚಪ್ಪರನ್ನ ಹೋಟೆಲ್ನಲ್ಲಿ ಮತ್ತೆ ಭೇಟಿಯಾಗುತ್ತಾರೆ. ನಾವು ಕರ್ನಾಟಕಕ್ಕೆ ಹೊರಟ್ಟಿದ್ದೇವೆ, ಹೋಗೋಣ ಎಂದು ಹೇಳುತ್ತಾರೆ. ಆದರೆ, ಹೊಟೆಲ್ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಾರೆ. ತಾವು ಯೋಧರೆಂದು ಪರಿಚಯ ತಿಳಿಸಿದ ಇವರು, ಈ ಅಜ್ಜ ತಮ್ಮ ಊರಿನವರಾಗಿದ್ದು, ಅವರನ್ನ ಕರೆದುಕೊಂಡು ಹೋಗುತ್ತೇವೆ ಅಂತಾ ಹೇಳಿ, ಆ ಹಿರಿಜೀವವನ್ನ ಬಂಧನದಿಂದ ಮುಕ್ತಿಗೊಳಿಸುತ್ತಾರೆ. ಮುಂದೆ ಕೆಂಚಪ್ಪನ ಮಾಹಿತಿ ಪಡೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡ್ತಾರೆ.