ಕಾನಪುರ: ಒಳ್ಳೆಯ ಕೆಲಸದ ಹೆಸರಲ್ಲಿ ಜನರನ್ನು ವಂಚಿಸಲು ದುಷ್ಕರ್ಮಿಗಳು ಸದಾ ಸಿದ್ಧವಿರುತ್ತಾರೆ. ಇದೀಗ ಅಯೋಧ್ಯೆಯಲ್ಲಿ ಕಟ್ಟಲು ಯೋಜಿಸಲಾಗಿರುವ ಭವ್ಯ ರಾಮ ಮಂದಿರದ ಹೆಸರಲ್ಲಿ ಕೂಡ ವಂಚನೆಗೆ ತೊಡಗಿರುವುದು ಬೆಳಕಿಗೆ ಬಂದಿದೆ. ಈ ರೀತಿಯ ಎರಡು ಪ್ರಯತ್ನಗಳನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆ ಹಚ್ಚಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಉತ್ತರಪ್ರದೇಶದ ಕಾನಪುರದಲ್ಲಿ ಚಂದ್ರಪ್ರಕಾಶ್ ತ್ರಿಪಾಠಿ ಮತ್ತು ಅಶೋಕ್ ರಾಜಪೂತ್ ಎಂಬುವರು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿರುವುದಾಗಿ ಜನರಿಂದ ಹಣ ಪಡೆಯುತ್ತಿದ್ದರು. ಇದಕ್ಕಾಗಿ ನಕಲಿ ರಸೀತಿಗಳನ್ನು ನೀಡಿ ವಂಚಿಸುತ್ತಿದ್ದ ಈರ್ವರನ್ನೂ ಕಾನಪುರ ಪೊಲೀಸರು ಗುರುವಾರ (ಫೆಬ್ರವರಿ 11) ಬಂಧಿಸಿದ್ದಾರೆ. ಈ ಬಗ್ಗೆ ಎಫ್ಐಆರ್ ದಾಖಲಿಸಿದ್ದು, ಈ ಕೃತ್ಯದಲ್ಲಿ ಶಾಮೀಲಾಗಿರುವ ಇತರರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಾನಪುರ ಸೌತ್ ಎಸ್ಪಿ ದೀಪಕ್ ಭುಕರ್ ತಿಳಿಸಿದ್ದಾರೆ.
ಇದೇ ರೀತಿ ರಾಮ ನಿರ್ಮಾಣದ ಕಾರ್ಯ ನಿರ್ವಹಿಸುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಹೆಸರು ಬಳಸಿ ನಕಲಿ ರಸೀತಿಗಳನ್ನು ಮುದ್ರಿಸಿ ಹಣ ಸಂಪಾದಿಸುವ ಹುನ್ನಾರದಲ್ಲಿದ್ದ ಇನ್ನೂ ಇಬ್ಬರನ್ನು ರಾಜ್ಯದ ಬುಲಂದ್ಶಹರ್ ಜಿಲ್ಲೆಯಿಂದ ಬಂಧಿಸಲಾಗಿದೆ. ಬೈಂಡಿಂಗ್ಗಾಗಿ ಬಂದ ರಸೀತಿ ಪುಸ್ತಕಗಳ ಬಗ್ಗೆ ಅನುಮಾನಗೊಂಡ ಸಿಬ್ಬಂದಿಯೊಬ್ಬ ಪೊಲೀಸರಿಗೆ ಸುಳಿವು ನೀಡಿದ. ಹೀಗೆ ನಕಲಿ ರಸೀತಿಗಳನ್ನು ಬಳಸಿ ಹಣ ಸಂಪಾದಿಸುವ ಯೋಜನೆ ಮಾಡಿದ್ದ ದೀಪಕ್ ಠಾಕೂರ್ ಮತ್ತು ರಾಹುಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ರಸೀತಿಗಳನ್ನು ಮುದ್ರಿಸಿದ ಪ್ರಿಂಟಿಂಗ್ ಪ್ರೆಸ್ ಮಾಲೀಕ ಇಕ್ಲಖ್ ಖಾನ್ ಪರಾರಿಯಾಗಿದ್ದಾನೆ ಎಂದು ಬುಲಂದ್ಶಹರ್ ಎಸ್ಪಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.