ಬಾಗಲಕೋಟೆ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿದೆ. ಇದು ಶತಃಸಿದ್ದ. ನಾನು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುವುದು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬಾದಾಮಿ ತಾಲೂಕು ಗೋವನಕೊಪ್ಪದಲ್ಲಿ 2 ಕೋಟಿ ವೆಚ್ಚದಲ್ಲಿ ಪ್ರವಾಹದಿಂದ ಹಾನಿಯಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ರಾಜ್ಯದ ಜನ ಹಾಗೂ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಿದರೆ ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ. ಇದಕ್ಕೆ ಜನ ತೀರ್ಮಾನ ಮಾಡಬೇಕು. ಶಾಸಕರು, ಹೈಕಮಾಂಡ್ ನಿರ್ಧರಿಸಿದ ಮೇಲೆ ನಾನು ಸಿಎಂ ಆಗುವುದು ನಿರ್ಧಾರವಾಗುತ್ತದೆ ಎಂದು ಹೇಳಿದರು.
ಹೌದ್ಧೋ ಹುಲಿಯಾ ಬೇಕು
ಗೋವನಕೊಪ್ಪದಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ ನೆರೆದ ಜನರು, ರಾಜ್ಯಕ್ಕೆ ಮತ್ತೆ ಹೌದ್ದೋ ಹುಲಿಯಾ ಬೇಕು. ನೀವೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಕೂಗಿದರು. ಆಗ ಸಿದ್ದರಾಮಯ್ಯ, ನೀವೆಲ್ಲ ಮತ್ತೆ ಆಶೀರ್ವಾದ ಮಾಡಿ. ಆಗ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.
ಕಾಲೇಜು ಕಟ್ಟಡಕ್ಕೆ ಹಣ ಕೊಡಲಿಲ್ಲ
ನಾನು ಸಿಎಂ ಆಗಿದ್ದಾಗ ಅನುದಾನ ಕಡಿಮೆ ಆಗಿರಲಿಲ್ಲ. ಈಗ ಏನೇ ಕೇಳಿದರೂ ದುಡ್ಡಿಲ್ಲ ಎನ್ನುತ್ತಿದ್ದಾರೆ. ಮಾತೆತ್ತಿದರೆ ಕೋವಿಡ್ ಎನ್ನುತ್ತಾರೆ. ಈ ಬಾರಿ 35 ಸಾವಿರ ಕೋಟಿ ಸಾಲ ಪಡೆಯುತ್ತಿದ್ದಾರೆ. ನಾನು ಸಚಿವರಿಗೆ ಕೆರೂರ ಪಟ್ಟಣದಲ್ಲಿ ಕಾಲೇಜು ಕಟ್ಟಡಕ್ಕೆ ಹಣ ಕೇಳಿದ್ದೆ. ಆ ಸಚಿವರು ಹಣ ಇಲ್ಲ ಎನ್ನುತ್ತಿದ್ದಾರೆ.ಅದಕ್ಕೆ ನಾನು ಮತ್ತೆ ಯಾಕೆ ಸಚಿವನಾದೆ ಎಂದು ಕೇಳಿದೆ ಎಂದರು.
ಎಚ್ಡಿಕೆ ಭಿಕ್ಷೆ ಕೊಟ್ಟಿಲ್ಲ
ಬಾದಾಮಿ ಅಭಿವೃದ್ಧಿಗೆ ನಾನೇ ಅನುದಾನ ಕೊಟ್ಟಿದ್ದೇನೆ ಎಂದು ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರನ್ನು ಸಿಎಂ ಮಾಡಿದ್ದು ಯಾರು, 80 ಜನ ಶಾಸಕರನ್ನು ಇಟ್ಟುಕೊಂಡು, 37 ಜನ ಎಂಎಲ್ಎ ಇರುವವರನ್ನು ಸಿಎಂ ಮಾಡಿದ್ದೇವು. ನಾವು ಸಿಎಂ ಮಾಡದೇ ಇದ್ದಿದ್ದರೆ ಅನುದಾನ ಎಲ್ಲಿಂದ ಕೊಡುತ್ತಿದ್ದರು. ನಾನು ಎಂಎಲ್ಎ ಅಲ್ವಾ, ನನಗೆ ಅನುದಾನ ಕೇಳುವ ಹಕ್ಕಿಲ್ವಾ? ಅವರು ಪುಕ್ಕಟೆ ಅಥವಾ ಭಿಕ್ಷೆ ಕೊಟ್ಟಿಲ್ಲ. ಅವರನ್ನು ಸಿಎಂ ಮಾಡಿದ್ದೇ ನಾವು. ಹೀಗಾಗಿ ಅನುದಾನ ಕೊಡಲೇಬೇಕು. ಅದೂ ಸರಿಯಾಗಿ ಕೊಡಲಿಲ್ಲ. ಅಲ್ಪಸ್ವಲ್ಪ ಕೊಟ್ಟರು ಎಂದು ಹೇಳಿದರು.
ಅಧಿಕಾರ ಬಿಟ್ಟು ಹೋಗಿ
ಬಿಜೆಪಿಯವವರಿಗೆ ಅಧಿಕಾರವನ್ನು ನಿರ್ವಹಿಸಲು ಬರದಿದ್ದರೆ ಬಿಟ್ಟು ಹೋಗಿ. ನಾವು ಜನಪರ ಆಡಳಿತ ನೀಡುತ್ತೇವೆ. ಯಜಮಾನಿಕೆ ಮಾಡಲು ಆಗದಿದ್ದರೆ ಬೇರೆಯವರು ಮಾಡುತ್ತಾರೆ. ನನ್ನ ಅನೇಕ ಕೆಲಸ ನಿಲ್ಲಿಸಿದ್ದಾರೆ. ಹೊಟ್ಟೆ ಉರಿಯುತ್ತಿದೆ. ಮೋದಿ ಮೋದಿ ಎನ್ನುತ್ತಾರೆ. ಮೋದಿ ಏನು ಮಾಡಿದ್ದಾರೆ. ಮೋದಿ ಏಳು ಸುತ್ತಿನ ಕೋಟೆ ಕಟ್ಟಿಕೊಂಡು ತನ್ನ ಪಾಡಿಗೆ ತಾನು ದೆಹಲಿಯಲ್ಲಿ ಇದ್ದಾರೆ. ಮೋದಿ ಇಲ್ಲಿಗೆ ಬಂದು ಕೆಲಸ ಮಾಡುತ್ತಾರಾ ಎಂದು ಪ್ರಶ್ನಿಸಿದರು.