ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸುಳ್ಳು ಅಫಿಡವಿಡ್ ಸಲ್ಲಿಸಿ ಸಿಕ್ಕಿಹಾಕಿಕೊಂಡಿದ್ದಾರೆ ನಟ ಸಲ್ಮಾನ್ ಖಾನ್.
1998 ರಲ್ಲಿ ಜೋಧಪುರದಲ್ಲಿ ಕೃಷ್ಣಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 2003 ರಲ್ಲಿ ಸಲ್ಮಾನ್ ಖಾನ್ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ಆದರೆ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ದಾಖಲಿಸಲಾಗಿತ್ತು.
ಬಂದೂಕಿನ ಲೈಸೆನ್ಸ್ ಅನ್ನು ಸಲ್ಲಿಸುವಂತೆ ಸಲ್ಮಾನ್ ಖಾನ್ ಗೆ ಜೋಧ್ಪುರ ನ್ಯಾಯಾಲಯವು ಸೂಚಿಸಿತ್ತು. ಆದರೆ ಲೈಸೆನ್ಸ್ ಕಳೆದುಹೋಗಿದೆ ಎಂದು ಅಫಿಡವಿಟ್ ಸಲ್ಲಿಸಿದ್ದ ಸಲ್ಮಾನ್ ಖಾನ್, ಬಂದೂಕು ಕಳೆದು ಹೋಗಿರುವ ಬಗ್ಗೆ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದಿದ್ದರು.
ಆದರೆ ಆ ನಂತರ ನಡೆದ ತನಿಖೆಯಿಂದ ಬಂದೂಕಿನ ಲೈಸೆನ್ಸ್ ಕಳೆದು ಹೋಗಿಲ್ಲ ಎಂಬುದು ನ್ಯಾಯಾಲಕ್ಕೆ ಗೊತ್ತಾಗಿತ್ತು. ಲೈಸೆನ್ಸ್ ಅನ್ನು ಪುನರ್ನವೀಕರಣಕ್ಕೆ ನೀಡಲಾಗಿತ್ತು ಎಂಬುದು ಸಹ ನ್ಯಾಯಾಲಯಕ್ಕೆ ತಿಳಿದು ಬಂದಿತ್ತು. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಸಲ್ಮಾನ್ ಖಾನ್ ಅನ್ನು ಶಿಕ್ಷಿಸಬೇಕು ಎಂದು ಸರ್ಕಾರ ಪರ ವಕೀಲರು ವಾದಿಸಿದ್ದಾರೆ.
ಕೃಷ್ಣಮೃಗ ಭೇಟೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು ಈಗ ಈ ಬಗ್ಗೆ ಆಕ್ಷೇಪ ಎತ್ತಿದೆ. ಆದರೆ ಸುಳ್ಳು ಅಫಿಡವಿಟ್ ಸಲ್ಲಿಸಿರುವ ಬಗ್ಗೆ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿರುವ ಸಲ್ಮಾನ್ ಖಾನ್ ವಕೀಲ ಹಸ್ತಿಮಲ್ ರಸ್ವತ್, ಮಾಹಿತಿ ಕೊರತೆಯಿಂದಾಗಿ 2003 ರಲ್ಲಿ ಸುಳ್ಳು ಅಫಿಡವಿಟ್ ಸಲ್ಲಿಸಲಾಗಿದೆ. ಸಲ್ಮಾನ್ ಖಾನ್ ಆ ಸಮಯದಲ್ಲಿ ಬಹಳ ಬ್ಯುಸಿ ಇದ್ದ ಕಾರಣ ಅವರ ಲೈಸೆನ್ಸ್ ಅನ್ನು ಸಹಾಕರು ರಿನೀವಲ್ಗೆ ನೀಡಿರುವ ಮಾಹಿತಿ ಅವರಿಗೆ ಗೊತ್ತಿರಲಿಲ್ಲ. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅನ್ನು ಕ್ಷಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೃಷ್ಣಮೃಗ ಭೇಟೆಯ ಅಂತಿಮ ತೀರ್ಪನ್ನು ಫೆಬ್ರವರಿ 11 ನೇ ತಾರೀಖಿನಂದು ತಿಳಿಸುವುದಾಗಿ ನ್ಯಾಯಾಲಯವು ಹೇಳಿದೆ. ವಿಡಿಯೋ ಮೂಲಕ ಸಲ್ಮಾನ್ ಖಾನ್ ಅಂತಿಮ ತೀರ್ಪನ್ನು ಕೇಳಲಿದ್ದಾರೆ.
1998 ರಲ್ಲಿ ಹಮ್ ಸಾಥ್ ಸಾಥ್ ಹೇ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಶಿಕಾರಿಗೆ ಹೋಗಿದ್ದ ಸಲ್ಮಾನ್ ಖಾನ್ ಹಾಗೂ ಸಿನಿಮಾದ ಸಹನಟರು ಕೃಷ್ಣಮೃಗಗಳನ್ನು ಭೇಟೆಯಾಡಿದ್ದರು. ಆ ಪ್ರಕರಣದ ವಿಚಾರಣೆ ಈಗಲೂ ನಡೆಯುತ್ತಿದೆ.