ಮಂಡ್ಯ: ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಆಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಅಕ್ಕಿ ಮುಕ್ಕುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಒಂದು ಕೈಯಲ್ಲಿ ಅಕ್ಕಿ ಮತ್ತು ಮತ್ತೊಂದು ಕೈಯಲ್ಲಿ ನೀರಿನ ಬಾಟಲಿಯಿಂದ ನೀರು ಕುಡಿದು ಪ್ರತಿಭಟಿಸಿದರು.
ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು, ಬಡವರು, ಕಡುಬಡವರು ಹಾಗೂ ಮಧ್ಯಮ ವರ್ಗದವರು ಕಷ್ಟಕ್ಕೀಡಾಗಿದ್ದಾರೆ. ಪ್ರಸ್ತುತದಲ್ಲಿ ಸಾಯುವ ಪರಿಸ್ಥಿತಿ ಎದುರಾಗಿದೆ. ಬೆಲೆ ಏರಿಕೆಯಿಂದ ಕಳ್ಳತನ, ದರೋಡೆ, ಕೊಲೆ ಹೆಚ್ಚಾಗಿದೆ. ಬಿಜೆಪಿ ನೇತೃತ್ವದ ಸರ್ಕಾರಗಳು ಒಂದಲ್ಲ ಒಂದು ರೀತಿಯಾಗಿ ಜನರಿಗೆ ನೋವು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರವು ಬಡ ರೈತರ ಮತ್ತು ಬಡ ಜನರ ಜೀವನವನನ್ನು ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆ ಮೂಲಕ ಬೆಲೆ ನಿಯಂತ್ರಣಕ್ಕೆ ಅಗತ್ಯ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಭಾಗದ ಕೆ.ಎಂ.ರಾಧಾಕೃಷ್ಣ, ಉಮ್ಮಡಹಳ್ಳಿ ನಾಗೇಶ್, ಎಚ್.ವಿ.ರಾಮಕೃಷ್ಣ, ಕರಿಯಪ್ಪಚಾರಿ, ಬೋರಲಿಂಗ, ಕೆ.ಸಿ.ಯೋಗೇಶ್, ಮುಖಂಡರಾದ ಅಂಜನಾ ಶ್ರೀಕಾಂತ್, ಶ್ರೀಧರ್ ಇತರರು ಭಾಗವಹಿಸಿದ್ದರು.