ಬಾಗಲಕೋಟೆ: ಬಾದಾಮಿ ತಾಲೂಕಿನ ಗಣಿ ಸಚಿವ ಮುರುಗೇಶ್ ನಿರಾಣಿ ಕ್ಷೇತ್ರದ ಕಗಲಗೊಂಬ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಅಭಿವೃದ್ಧಿ, ಕಾಂಪೌಂಡ್ ನಿರ್ಮಾಣದ ಹೆಸ್ರಲ್ಲಿ ಕಾಮಗಾರಿ ಮಾಡದೇ ಅಧಿಕಾರಿಗಳು, ಗುತ್ತಿಗೆದಾರರು ಬರೋಬ್ಬರಿ 5.98 ಲಕ್ಷ ಬಿಲ್ ಎತ್ತುವಳಿ ಮಾಡಿರುವ ಆರೋಪ ಕೇಳಿಬಂದಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಸೂಳಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗಲಗೊಂಬ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಮೈದಾನ ಅಭಿವೃದ್ಧಿಗಾಗಿ 2019-20ನೇ ಸಾಲಿನಲ್ಲಿ ಮೈದಾನ ಅಭಿವೃದ್ಧಿ, ಜೊತೆಗೆ ಕಾಂಪೌಂಡ್ ನಿರ್ಮಾಣ, ಹಾಗೂ ಶಾಲಾ ಮಕ್ಕಳಿಗೆ ಕುಡಿಯೋ ನೀರಿನ ಟ್ಯಾಂಕ್ ಗೆ ಪೈಪ್ ಲೈನ್ ಅಳವಡಿಸದೇ ಬಿಲ್ ಎತ್ತುವಳಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸೂಳಿಕೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಗುತ್ತಿಗೆದಾರರು, ಹಾಗೂ ಹಿಂದಿನ ಗ್ರಾಮ ಪಂಚಾಯಿತಿ ಸದಸ್ಯರು ಅಕ್ರಮದಲ್ಲಿ ಭಾಗಿಯಾಗಿರೋದ್ದು,ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಾಲಾ ಮೈದಾನ ಅಭಿವೃದ್ಧಿಗೆಂದು 2.97 ಲಕ್ಷ, ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ 2.21 ಲಕ್ಷ ಹಾಗೂ ಕುಡಿಯೋ ನೀರಿನ ಪೈಪ್ ಲೈನ್ ಅಳವಡಿಸೋಕೆ 80ಸಾವಿರ ಸೇರಿ ಒಟ್ಟು 5.98 ಲಕ್ಷ ಬಿಲ್ ಎತ್ತುವಳಿ ಮಾಡಿರೋದು ಗ್ರಾಮಸ್ಥರು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿದಾಗ ಬೆಳಕಿಗೆ ಬಂದಿದೆ.