Breaking News
Home / Uncategorized / ಆತ್ಮನಿರ್ಭರ ಗೃಹಲಕ್ಷ್ಮೀ ಲೆಕ್ಕಾಚಾರ :ವಿತ್ತ ಸಚಿವೆ ನಿರ್ಮಲಾ ಬಜೆಟ್‌ನಲ್ಲಿ ಅನುದಾನದ ಮಹಾಪೂರ

ಆತ್ಮನಿರ್ಭರ ಗೃಹಲಕ್ಷ್ಮೀ ಲೆಕ್ಕಾಚಾರ :ವಿತ್ತ ಸಚಿವೆ ನಿರ್ಮಲಾ ಬಜೆಟ್‌ನಲ್ಲಿ ಅನುದಾನದ ಮಹಾಪೂರ

Spread the love

 

 

ಹೊಸದಿಲ್ಲಿ: ಕೊರೊನೋತ್ತರ ಕಾಲದಲ್ಲಿ ಹೆಚ್ಚು ಜನಪ್ರಿಯ ಯೋಜನೆಗಳಿಗೆ ಜೋತು ಬೀಳದೆ ಜನಪರವಾದ, ಉದ್ಯೋಗ ಸೃಷ್ಟಿ ಮತ್ತು ಆರೋಗ್ಯ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಿದ ಬಜೆಟ್‌ ಮಂಡಿಸಿದ್ದಾರೆ ನಿರ್ಮಲಾ ಸೀತಾರಾಮನ್‌. ಅವರ ಆಯ-ವ್ಯಯದಲ್ಲಿ “ಗೃಹಲಕ್ಷ್ಮಿಯ ಲೆಕ್ಕಾಚಾರದ ಎಚ್ಚರ’ ಕಂಡುಬಂದಿದ್ದರೆ ಅಚ್ಚರಿಯೇನೂ ಇಲ್ಲ!

2020ರ ವರ್ಷಾರಂಭದಲ್ಲಿ ಚೀನ ಸಹಿತ ಜಗತ್ತಿನ ಎಲ್ಲ ದೇಶಗಳಲ್ಲಿ ಕೊರೊನಾ ಕಾಣಿಸಿಕೊಂಡ ಕೂಡಲೇ ಭಾರತವೂ ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಹರಿಸಿತ್ತು. ಇದನ್ನೇ ಪಾಠವಾಗಿ ಸ್ವೀಕರಿಸಿದ ಕೇಂದ್ರ ಸರಕಾರ ಈ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ದಾಖಲೆ ಪ್ರಮಾಣದ ಅನುದಾನ ಮೀಸಲಿರಿಸಿದೆ. ಹಾಗೆಯೇ ಉದ್ಯೋಗ ಸೃಷ್ಟಿಸುವ ಮತ್ತು ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವ ಮೂಲಸೌಕರ್ಯ ಯೋಜನೆಗಳಿಗೂ ತುಸು ಹೆಚ್ಚೇ ಎನ್ನುವ ಅನುದಾನ ನೀಡಿದೆ.

ಆರ್ಥಿಕ ತಜ್ಞರು ಹೇಳುವ ಪ್ರಕಾರ ಇದು ಪೂರ್ಣ ಸಮತೋಲನದ ಮತ್ತು ಕೊರೊನೋತ್ತರದಲ್ಲಿ ಸೂಕ್ತವೆನಿಸುವ ಹಾಗಿನ ಬಜೆಟ್‌. ಕೊರೊನಾ ವೇಳೆಯಲ್ಲಿ ಸಾಕಷ್ಟು ಹಣ ವೆಚ್ಚ ಮಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಣಕಾಸಿನ ಕೊರತೆ ಅನುಭವಿಸುತ್ತಿವೆ. ಈ ಹೊತ್ತಿನಲ್ಲಿ ಜನಪ್ರಿಯ ಯೋಜನೆಗಳ ಮೊರೆ ಹೊಕ್ಕರೆ ಹಣ ಹೊಂದಿಸುವುದು ಅಸಾಧ್ಯ. ಹೀಗಾಗಿ ಇರುವುದರಲ್ಲೇ ಯಾವುದಕ್ಕೆ ಮತ್ತು ಹೇಗೆ ವೆಚ್ಚ ಮಾಡಬೇಕು ಎಂಬುದನ್ನು ಪರಿಗಣಿಸಿ “ಮನೆ ಒಡತಿ’ಯ ಲೆಕ್ಕಾಚಾರದಲ್ಲಿ ನಿರ್ಮಲಾ ಬಜೆಟ್‌ ರೂಪಿಸಿದ್ದಾರೆ, ಆಯಾಯ ಕ್ಷೇತ್ರಗಳಿಗೆ ಹಣ ಮೀಸಲಿಟ್ಟಿದ್ದಾರೆ.

ಹಾಗೆಯೇ ಇದು ಸಂಪೂರ್ಣವಾಗಿ ಆತ್ಮನಿರ್ಭರ ಅಥವಾ ದೇಶೀಕರಣದ ಬಜೆಟ್‌. 30 ವರ್ಷಗಳ ಹಿಂದೆ, 1991ರಲ್ಲಿ ಡಾ| ಮನಮೋಹನ್‌ ಸಿಂಗ್‌ ದೇಶವು ಕಷ್ಟದಲ್ಲಿದ್ದಾಗ ಜಾಗತೀಕರಣದ ಬಜೆಟ್‌ ಮಂಡಿಸಿ ಹೊಸ ಆರ್ಥಿಕ ದಿಕ್ಕು ತೋರಿಸಿದ್ದರು. ಕಾಲಚಕ್ರ ಉರುಳಿ, ಈ ಕೊರೊನೋತ್ತರ ಘಟ್ಟಕ್ಕೆ ಬಂದು ನಿಂತಿದೆ. ಈಗಲೂ ಅಂಥದ್ದೇ ಸಂಕಷ್ಟದ ಹಾದಿಯಲ್ಲಿ ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಇದೆ. ಇದನ್ನು ಗಮನದಲ್ಲಿ ಇರಿಸಿಕೊಂಡು “ಲೋಕಲ್‌’ನತ್ತ ಹೆಚ್ಚು ಆಸ್ಥೆ ವಹಿಸಿ, ಆತ್ಮನಿರ್ಭರ ಬಜೆಟ್‌ ಮಂಡಿಸಿದ್ದಾರೆ ನಿರ್ಮಲಾ.

ರಕ್ಷಣೆಗೆ ಹೆಚ್ಚಿನ ಹಣ
ಚೀನ ಜತೆಗಿನ ಸಂಘರ್ಷದಿಂದಾಗಿ ಈ ಬಾರಿ ರಕ್ಷಣ ವಲಯಕ್ಕೆ ಹೆಚ್ಚಿನ ಹಣ ನೀಡಲಾಗಿದೆ. ಕಳೆದ ಬಾರಿಗಿಂತ ಶೇ. 7ರಷ್ಟು ಹೆಚ್ಚು ಅಂದರೆ, 3.62 ಲಕ್ಷ ಕೋಟಿ ರೂ. ನೀಡಲಾಗಿದೆ. ಶಸ್ತ್ರಾಸ್ತ್ರಗಳು ಮತ್ತು ಸೇನೆಯ ಆಧುನೀಕರಣಕ್ಕಾಗಿ 1,35,060 ಕೋಟಿ ರೂ. ವಿನಿಯೋಗಿಸಬಹುದಾಗಿದೆ. ಕಳೆದ ಬಾರಿ ಇದಕ್ಕಾಗಿ 1,13,734 ಕೋಟಿ ರೂ. ನೀಡಲಾಗಿತ್ತು.

ಆದಾಯ ತೆರಿಗೆ: ಬದಲಾವಣೆ ಇಲ್ಲ
ಪ್ರತೀ ಬಾರಿ ಬಜೆಟ್ನಲ್ಲಿ ಇಡೀ ಮಧ್ಯಮ ವರ್ಗ ಕಾಯುವುದು ಇದೊಂದೇ ವಿಷಯ. ಆದಾಯ ತೆರಿಗೆ ವಿಚಾರದಲ್ಲಿ ಸರಕಾರ ತಮಗೆ ಅನುಕೂಲಕರ ಬದಲಾವಣೆ ತರುತ್ತದೆ ಎಂದೇ ಕಾಯುತ್ತಾರೆ. ಆದರೆ ಮಧ್ಯಮ ವರ್ಗಕ್ಕೆ ನಿರ್ಮಲಾ ಬಜೆಟ್‌ ನಿರಾಸೆ ತಂದಿದೆ. ವೇತನದಾರರ ಯಾವುದೇ ತೆರಿಗೆ ಹಂತವನ್ನು ಮುಟ್ಟದೆ ಕೇವಲ 75 ವರ್ಷದ ಹಿರಿಯ ನಾಗರಿಕರಿಗೆ ಮಾತ್ರ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇವರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಬೇಕಿಲ್ಲ.

ತುಟ್ಟಿ:
– ಫ್ರಿಜ್‌,
– ಎಸಿ ಕಂಪ್ರಸರ್‌
– ಎಲ್‌ಇಡಿ ದೀಪಗಳು
– ಕಚ್ಚಾ ರೇಷ್ಮೆ ಮತ್ತು ಹತ್ತಿ
– ಸೋಲಾರ್‌ ಇನ್‌ವರ್ಟರ್‌ ಮತ್ತು ದೀಪಗಳು
– ಆಟೊಮೊಬೈಲ್‌ ಪರಿಕರಗಳು
– ಮೊಬೈಲ್‌ ಬಿಡಿಭಾಗಗಳು
– ಮೊಬೈಲ್‌ ಫೋನ್‌ ಚಾರ್ಜರ್‌ಗಳು
– ಚರ್ಮದ ಉತ್ಪನ್ನಗಳು
– ನೈಲಾನ್‌ ಫೈಬರ್‌ ಮತ್ತು ಯಾರ್ನ್

ಅಗ್ಗ
- ಬಂಗಾರ ಮತ್ತು ಬೆಳ್ಳಿ
- ಪ್ಲಾಟಿನಂ ಮತ್ತು ಪಲಾಡಿಯಂ
- ವೈದ್ಯಕೀಯ ಪರಿಕರಗಳು

ಅಭಿವೃದ್ಧಿಯ ಮೇಲೆ ಗಮನ
ಕೊರೊನಾ ಕಾಲದಲ್ಲಿ ಮಾಡಲಾದ ಸುಧಾರಣೆ ಗಳಿರಲಿ ಅಥವಾ ಆತ್ಮನಿರ್ಭರ ಭಾರತದ ಸಂಕಲ್ಪವಾಗಿರಲಿ, ಸಾಂಕ್ರಾಮಿಕದ ಈ ಹೋರಾಟದಲ್ಲಿ ಭಾರತವು “ಪ್ರತಿಗಾಮಿ’ (reactive)ಯಾಗುವ ಬದಲು ಆರಂಭದಿಂದಲೂ “ಪುರೋಗಾಮಿ’ (proactive) ಯಾಗಿದೆ. ದೇಶದ ಈ ಸಕ್ರಿಯಾತ್ಮಕ ನಡಿಗೆಯನ್ನು ಮುಂದಿನ ಹಂತಕ್ಕೆ ಒಯ್ಯುವ ನೆಲೆಯಲ್ಲಿ ಈ ಬಜೆಟ್‌ ರೂಪುಗೊಂಡಿದೆ.
ಜಾನ್‌ ಭೀ ಜಹಾಂ ಭೀ (ಜೀವವೂ ಮುಖ್ಯ ಜಗತ್ತೂ ಮುಖ್ಯ) ಎಂಬ ಧ್ಯೇಯೋದ್ದೇಶದ ಅಡಿ ಯಾವ ಕ್ಷೇತ್ರಗಳಲ್ಲಿ ಸಮೃದ್ಧಿ ಮತ್ತು ಸ್ವಾಸ್ಥ್ಯ ವೇಗವಾಗಿ ಬೆಳೆಯುತ್ತದೆಯೋ ಅಂಥ ಕ್ಷೇತ್ರಗಳ ಅಭಿವೃದ್ಧಿಯ ಮೇಲೆ ಆಯವ್ಯಯ ಗಮನ ಕೇಂದ್ರೀಕರಿಸಿದೆ. ಉದಾ ಹರಣೆಗೆ, ಎಂಎಸ್‌ಎಂಇ ಮತ್ತು ಮೂಲಸೌಕರ್ಯಕ್ಕೆ ವಿಶೇಷವಾಗಿ ಒತ್ತು ನೀಡಲಾಗಿದೆ. ಅದಷ್ಟೇ ಅಲ್ಲದೆ ಈ ಬಜೆಟ್‌ ಆರೋಗ್ಯ ಕ್ಷೇತ್ರದ ಮೇಲೆ ಗಮನಹರಿಸಿರುವ ರೀತಿ ಅಭೂತಪೂರ್ವವಾದದ್ದು.

 

 

 

ಬಜೆಟ್‌ ತನ್ನ ಹೃದಯದಲ್ಲಿ ನಮ್ಮ ಗ್ರಾಮಗಳಿವೆ, ನಮ್ಮ ರೈತರಿದ್ದಾರೆ ಎಂದು ತೋರಿಸುತ್ತದೆ. ಈ ದಶಕದ ಆರಂಭಕ್ಕೆ ಒಂದು ಬಲಿಷ್ಠ ಬುನಾದಿ ಹಾಕುವಂಥ ಬಜೆಟ್‌ ಇದು. ಆತ್ಮನಿರ್ಭರ ಭಾರತದ ದಾರಿಯಲ್ಲಿ ದೇಶವನ್ನು ಕೊಂಡೊಯ್ಯಲಿರುವ ಈ ಮಹತ್ವಪೂರ್ಣ ಬಜೆಟ್‌ಗಾಗಿ ನಾನು ಎಲ್ಲ ದೇಶವಾಸಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ.

ಬಜೆಟ್‌ನಲ್ಲಿ ಎರಡು ವಿಶೇಷ
ಈ ಬಜೆಟ್‌ನಲ್ಲಿ 2 ವಿಶೇಷಗಳಿವೆ. ಮೊದಲನೆಯದು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಖರ್ಚು. ಎರಡನೆಯದು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿರುವುದು. ಬಜೆಟ್‌ನಲ್ಲಿ ದೊಡ್ಡ ಪಾಲನ್ನು ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಲಾಗಿದೆ ಎಂದಾಕ್ಷಣ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ ಎಂದರ್ಥವಲ್ಲ. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಸಿಗಲಿ ಎಂಬ ಕಾರಣಕ್ಕಾಗಿ ನಬಾರ್ಡ್‌ ಅನುದಾನವನ್ನು ಹಚ್ಚಿಸಲಾಗಿದೆ.

ಬ್ಯಾಡ್‌ ಬ್ಯಾಂಕ್‌
2010ರಿಂದ 2020ರ ವರೆಗೆ ದೇಶ ಪ್ರಮುಖವಾಗಿ ಎದುರಿಸಿದ್ದು ಅನುತ್ಪಾದಕ ಸಾಲದ ಹೊರೆಯನ್ನು. ಈ ಸುಳಿಯಿಂದ ಹೇಗೆ ಹೊರಬರುವುದು ಎಂಬ ವಿಷಯ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ ಈ ಬಜೆಟ್‌ನಲ್ಲಿ ಬ್ಯಾಡ್‌ ಬ್ಯಾಂಕ್‌ ಪರಿಕಲ್ಪನೆ ಬಗ್ಗೆ ಹೇಳಲಾಗಿದೆ. ಈ ಮೂಲಕ ಎನ್‌ಪಿಎ ಸಮಸ್ಯೆಯನ್ನು ನಿವಾರಿಸುವ ಗುರಿ ಇದೆ. ಹಾಗೆಯೇ ಬ್ಯಾಂಕ್‌ಗಳಿಗೆ ಬಂಡವಾಳದ ರೂಪದಲ್ಲಿ 20 ಸಾವಿರ ಕೋಟಿ ರೂ. ನೀಡಲಾಗಿದೆ.

ಆರೋಗ್ಯಕ್ಕೆ ಹೆಚ್ಚಿನ ಒತ್ತು
ಈ ಬಾರಿ 6 ಸ್ತಂಭಗಳ ಮೇಲೆ ಬಜೆಟ್‌ ಕಟ್ಟಲಾಗಿದೆ. ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಿದ್ದು, 2.23 ಲಕ್ಷ ಕೋ.ರೂ. ಮೀಸಲಿಡಲಾಗಿದೆ. ಹಿಂದಿನ ಬಜೆಟ್ ಗಳಿಗೆ ಹೋಲಿಕೆ ಮಾಡಿದರೆ, ಇದು ಶೇ. 135ರಷ್ಟು ಹೆಚ್ಚು. ಇದರಲ್ಲೇ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಾಸ್ಥ ಭಾರತ್‌ ಯೋಜನೆಯನ್ನು ಘೋಷಿಸಲಾಗಿದ್ದು, ಇದಕ್ಕೆ ಮುಂದಿನ 6 ವರ್ಷಗಳಿಗಾಗಿ 64,180 ಕೋಟಿ ರೂ. ಮೀಸಲಿರಿಸಲಾಗಿದೆ.

ಮೂಲ ಸೌಕರ್ಯ ಕ್ಷೇತ್ರಕ್ಕೂ ಮಹತ್ವ ನೀಡಲಾಗಿದೆ. ಒಟ್ಟು 5.54 ಲಕ್ಷ ಕೋಟಿ ರೂ.ಗಳನ್ನು ನೀಡಲು ಉದ್ದೇಶಿಸಲಾಗಿದೆ. ಹೆದ್ದಾರಿ ಮತ್ತು ರಸ್ತೆ ವಲಯಕ್ಕೆ 1.18 ಲಕ್ಷ ಕೋಟಿ ರೂ., ರೈಲ್ವೇಗೆ 1.08 ಲಕ್ಷ ಕೋ. ರೂ. ಇದೆ. 2021-22ರಿಂದ ಮೊದಲ್ಗೊಂಡು ಮುಂದಿನ ಐದು ವರ್ಷಗಳಿಗಾಗಿ 1.97 ಲಕ್ಷ ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಹೆದ್ದಾರಿ, ರೈಲು, ಬಂದರು ಮತ್ತಿತರ ಮೂಲಸೌಕರ್ಯಗಳಿಗೆ ವೆಚ್ಚ ಮಾಡಲಾಗುತ್ತದೆ. ಭಾರೀ ಹಣ ವಿನಿಯೋಗಿಸುತ್ತಿರುವುದಕ್ಕೆ ಪ್ರಮುಖ ಕಾರಣ ಯುವಜನತೆಗೆ ಉದ್ಯೋಗ ನೀಡುವುದು. ಇದಕ್ಕೆ ಯಾವ ಮಾರ್ಗಗಳಿಂದ ಹಣ ತರಬೇಕು ಎಂಬ ಬಗ್ಗೆಯೂ ನೀಲನಕ್ಷೆ ರೂಪಿಸಲಾಗಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಅಪರಾಧವಾಗಿತ್ತು:ಮೋದಿ

Spread the love ಜೈಪುರ(ಮಾ.23): ಲೋಕಸಭೆ ಚುನಾವಣೆಗೂ ಮುನ್ನ ನಾಯಕರು ದೇಶಾದ್ಯಂತ ನಿರಂತರವಾಗಿ ಪ್ರವಾಸ ಮಾಡುತ್ತಿದ್ದರೆ, ಪ್ರಧಾನಿ ಮೋದಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ