ಬೆಂಗಳೂರು : ನಾನು ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ನಿರ್ಮಲಾ ಅವರು “ಆತ್ಮ ಬರ್ಬಾದ್” ಬಜೆಟ್ ಕೊಟ್ಟಿದ್ದಾರೆ ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಬಟೆಜ್ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ ಅದನ್ನು ಚೇತರಿಕೆ ಹಾದಿಗೆ ತರುತ್ತಾರೆ ಎಂಬ ನಿರೀಕ್ಷೆ ಇತ್ತು ಅದು ಹುಸಿಯಾಗಿದೆ. ಬಹಳ ಜನರು ಕೊರೊನಾ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡಿದ್ದರು. ಅವರಿಗೆ ಉದ್ಯೋಗ ಸೃಷ್ಟಿಸುವ ಪ್ರಯತ್ನ ಮಾಡಿಲ್ಲ.
ಇನ್ನು, ಈ ಬಾರಿ ಕೃಷಿ ಸೆಸ್ ಅಂತ 2.5 ರಿಂದ 3 ರ ವರೆಗೆ ಕೃಷಿ ಸೆಸ್ ಹಾಕಿದ್ದಾರೆ. ದೇಶಕ್ಕೆ ಬರುವ ಆಮದು ಸುಂಕವನ್ನು ಕಡಿಮೆ ಮಾಡಿದ್ದಾರೆ. ಗೊಬ್ಬರದ ಮೇಲೆ, ಯಂತ್ರೋಪಕರಣದ ಮೇಲೆ ಕೃಷಿ ಸೆಸ್ ಹಾಕಿ, ಆಮದು ಸುಂಕ ಕಡಿಮೆ ಮಾಡಿದ್ದಾರೆ. ಇದು ಯಾವ ರೀತಿಯ ಆರ್ಥಿಕತೆ ಎಂದು ಅರ್ಥವಾಗುವುದಿಲ್ಲ. ಅದರ ಬದಲಾಗಿ ರೈತಿರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬಹುದಿತ್ತು. ಅಥವಾ ಸಾಲ ಮನ್ನಾ ಮಾಡಬೇಕಿತ್ತು. ಮನಮೋಹನ್ ಸಿಂಗ್ ಅವಧಿಯ ನಂತರ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಅವರು ಹೇಳಿದರು.
ಕೃಷಿ ಉತ್ಪನ್ನಗಳ ಬೆಲೆ ಸ್ಥಿರವಾಗಿರಲು ಯಾವುದೇ ಕ್ರಮ ಕೈಗೊಂಡಿಲ್ಲ. ಕೃಷಿ ಉತ್ತೇಜನ ಯೋಜನೆಗಳಿಲ್ಲ. ವಿದ್ಯುತ್ ಖಾಸಗಿಕರಣ ಮಾಡಲು ಹೊರಟಿದ್ದಾರೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲ. ವಿಮೆಯಲ್ಲಿ ಶೇ 74 ರಷ್ಟು ವಿದೇಶಿ ಬಂಡವಾಳಕ್ಕೆ ಅವಕಾಶ ಕಲ್ಪಿಸಿದ್ದಾರೆ. ಚುನಾವಣೆ ನಡೆಯುವ ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೆರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ತಮಿಳುನಾಡು ಮೆಟ್ರೊಗೆ 63 ಸಾವಿರ ಕೋಟಿ ನೀಡಿದ್ದಾರೆ. ಕರ್ನಾಟಕಕ್ಕೆ 14 ಸಾವಿರ ಕೋಟಿ ಮಾತ್ರ ನೀಡಿದ್ದಾರೆ ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.
ದೇಶದಲ್ಲಿ ವಿತ್ತೀಯ ಕೊರತೆ ಹೆಚ್ಚಾಗುತ್ತಿದೆ. ನರೇಂದ್ರ ಮೋದಿ ಬಂದ ಮೇಲೆ ನಿತ್ಯ ಜಿಡಿಪಿ ಕುಸಿಯುತ್ತಲೇ ಇದೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಜಿಡಿಪಿ 9 ರಷ್ಟಿತ್ತು. ಆರ್ಥಿಕ ಸಮೀಕ್ಷೆ ಪ್ರಕಾರ ಜಿಡಿಪಿ 4.2 ರಷ್ಟಿದೆ. ಇದರಿಂದ ಉದ್ಯೋಗ ಸೃಷ್ಟಿ ಎಲ್ಲಿ ಆಗುತ್ತದೆ. ಜಿಡಿಪಿ ಈ ವರ್ಷ ಮೈನಸ್ 7 ಇದೆ. ಅದನ್ನು 11 ಕ್ಕೆ ಹೆಚ್ಚಿಸುವುದಾಗಿ ಹೇಳಿದ್ದಾರೆ. ಎಂಥಾ ಸುಳ್ಳಿನ ಕಂತೆ ಇದು. ಅಂಕಿ ಅಂಶಗಳ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡಿದರೆ ನಿಮಗೆ ನಡೆಸಲು ಯೋಗ್ಯತೆ ಇಲ್ಲ ಎಂದರ್ಥ. ಇದರಿಂದ ಸಾಮಾಜಿಕ ನ್ಯಾಯ ಉಳಿಸಲು ಸಾಧ್ಯವಾಗುವುದಿಲ್ಲ. ಅಂಬಾನಿ ಅದಾನಿ ಬಂದರೆ ಮೀಸಲಾತಿ ಉಳಿಯುತ್ತಾ..? ಇದು ಮೀಸಲಾತಿ ತೆಗೆಯುವ ಹುನ್ನಾರ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
2021-22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ(ಫೆ.1, 2021) ಲೋಕಸಭೆಯಲ್ಲಿ ಮಂಡಿಸಿದ್ದು, ಬೆಂಗಳೂರು ಮೆಟ್ರೋ 2ಎ ಹಾಗೂ 2ಬಿ ಯೋಜನೆಗೆ 14,788 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿರುವುದಾಗಿ ಘೋಷಿಸಿದ್ದಾರೆ.