ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು (ಜನವರಿ 27) ದುಬೈ ತಲುಪಿದ್ದಾರೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸುದೀಪ್ ಅವರನ್ನು ದುಬೈ ಸಂಸ್ಕೃತಿಯಂತೆ ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ.
ಕಿಚ್ಚ ಸುದೀಪ್ ದುಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದೀಪ್ ಅವರು ವಿಮಾನ ಇಳಿದು ಬರುತ್ತಿದ್ದಂತೆ ಹೂವಿನ ಮಾಲೆ ಹಾಕಿ, ಹೂಗುಚ್ಛ ನೀಡಿ ಹಾಗೂ ವಿಶೇಷವಾದ ಉಡುಗೊರೆಯನ್ನು ನೀಡಿ ಸ್ವಾಗತ ಕೋರಲಾಗಿದೆ.
ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಅವರ 25 ವರ್ಷ ಪೂರೈಸಿದ ಹಿನ್ನೆಲೆ ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫ ಮೇಲೆ ಸುದೀಪ್ ಅವರ ಕಟೌಟ್ ಪ್ರದರ್ಶನವಾಗಲಿದೆ. ಸುದೀಪ್ ನಟಿಸುತ್ತಿರುವ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಪೋಸ್ಟರ್ ಸಹ ಬುರ್ಜ್ ಖಲೀಫ ಮೇಲೆ ಅನಾವರಣವಾಗಲಿದೆ.
ಜನವರಿ 31ರಂದು ಬೆಳಗ್ಗೆ ಈ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆ ಕಿಚ್ಚ ಸುದೀಪ್ ದುಬೈಗೆ ತೆರೆಳಿದ್ದಾರೆ. ಪ್ರಸ್ತುತ ಕೊರೊನಾ ಲಾಕ್ಡೌನ್ ನಿಯಮಗಳು ಜಾರಿಯಲ್ಲಿದ್ದು, ಅದಕ್ಕಾಗಿಯೇ ನಾಲ್ಕು ದಿನ ಮುಂಚಿತವಾಗಿ ಸುದೀಪ್ ದುಬೈ ದೊರೆಗಳ ನಾಡಿಗೆ ತಲುಪಿದ್ದಾರೆ.s
ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ (ಈ ಹಿಂದೆ ಫ್ಯಾಂಟಮ್ ಹೆಸರಿನಿಂದ ಕರೆಯಲಾಗುತ್ತಿತ್ತು) ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ತಯಾರಾಗುತ್ತಿದೆ.
ಜಾಕ್ ಮಂಜು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಕಿಚ್ಚ ಸುದೀಪ್ ಅವರ 25 ವರ್ಷದ ಸಂಭ್ರಮದ ಮೆರುಗನ್ನು ಹೆಚ್ಚಿಸಲು ಈ ಯೋಜನೆ ಮಾಡಿಕೊಂಡಿದ್ದಾರೆ.