ಬೆಂಗಳೂರು, ಜ.26- ರೈತರ ಟ್ರ್ಯಾಕ್ಟರ್ ಭದ್ರಕೋಟೆ ಭೇದಿಸಲು ನಗರದಲ್ಲಿ ಪೊಲೀಸ್ ಚಕ್ರವ್ಯೂಹ ರಚಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ದೇಶಾದ್ಯಂತ ರೈತರು ಇಂದು ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದು, ನಗರದ ಆರು ಮಾರ್ಗಗಳ ಮೂಲಕ ರೈತರು ಫ್ರೀಡಂ ಪಾರ್ಕ್ ತಲುಪುತ್ತಿದ್ದಾರೆ. ನಗರಕ್ಕೆ ಟ್ರಾಕ್ಟರ್ ಪ್ರವೇಶಿಸಲು ಬೆಂಗಳೂರು ಪೊಲೀಸರು ಅವಕಾಶ ನಿರಾಕರಿಸಿದ್ದು, ಹೊರ ವಲಯಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಿ ಟ್ರಾಕ್ಟರ್ ಜೊತೆ ಆಗಮಿಸುವ ರೈತರನ್ನು ಗಡಿಯಲ್ಲೇ ತಡೆಯಲಾಗುತ್ತಿದೆ.
ಮೈಸೂರು ಮಾರ್ಗ: ಮೈಸೂರು ಸುತ್ತಮುತ್ತಲಿನಿಂದ ಆಗಮಿಸುವ ರೈತರನ್ನು ತಡೆಯಲು ಕೆಂಗೇರಿ ಸಮೀಪದ ನೈಸ್ ರಸ್ತೆ ಜಂಕ್ಷನ್ನಲ್ಲಿ 200 ಹೋಂಗಾಡ್ರ್ಸ್ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕೆಂಗೇರಿ ಗೇಟ್ ಉಪವಿಭಾಗದ ಎಸಿಪಿ ಕೃಷ್ಣಕುಮಾರ್ ನೇತೃತ್ವದಲ್ಲಿ ಉಪವಿಭಾಗದ ಎಲ್ಲಾ ಇನ್ಸ್ಪೇಕ್ಟರ್ಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಜೊತೆಗೆ 3 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಐದು ಖಾಲಿ ಬಸ್ ಹಾಗೂ ಎರಡು ಕ್ರೇನ್ಗಳನ್ನು ಇರಿಸಲಾಗಿದ್ದು, ನಗರಕ್ಕೆ ಟ್ರಾಕ್ಟರ್ ಪ್ರವೇಶಿಸಲು ಅವಕಾಶ ನೀಡಲಾಗಿಲ್ಲ.
ಮಾಗಡಿ ರಸ್ತೆ: ದೊಡ್ಡಗೊಲ್ಲರಹಟ್ಟಿ ನೈಸ್ ವೃತ್ತದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ನಂಜುಂಡೇಗೌಡ ನೇತೃತ್ವದಲ್ಲಿ ಆಯಾ ವಿಭಾಗದ ಎಲ್ಲಾ ಇನ್ಸ್ಪೆಕ್ಟರ್ಗಳು ಸೇರಿದಂತೆ 300ಕ್ಕೂ ಹೆಚ್ಚುಪೊಲೀಸರು ಹಾಗೂ ಗೃಹರಕ್ಷದ ದಳದ ಸಿಬ್ಬಂದಿಗಳನ್ನು ನಿಯೋಜಿಲಾಗಿದ್ದು, ಎರಡು ಖಾಲಿ ಬಸ್ ಮತ್ತು ಕ್ರೇನ್ ಸಿದ್ದಪಡಿಸಿಕೊಳ್ಳಲಾಗಿದೆ.