ಹುಬ್ಬಳ್ಳಿ: ಇಲ್ಲಿಯ ಗೋಕುಲ ಗಾರ್ಡನ್ನಲ್ಲಿ ನಿನ್ನೆ ಬಿಜೆಪಿಯಿಂದ ಜನಸೇವಕ ಸಮಾವೇಶ ನಡೆಯಿತು. ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ನೂತನ ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಧಾರವಾಡ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ನೂರಾರು ಗ್ರಾಮ ಪಂಚಾಯತಿ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದರು. ಬಿಜೆಪಿ ಮುಖಂಡರು ಗ್ರಾಮ ಪಂಚಾಯತಿ ನೂತನ ಸದಸ್ಯರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಸನ್ಮಾನಿಸಿದ್ರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ವಿ. ಸೋಮಣ್ಣ, ರವಿಕುಮಾರ್, ಮಹೇಶ್ ತೆಂಗಿನಕಾಯಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಜನಸೇವಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದರು. “60 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಮಾಡಿದೆ. ರೈತರು ದೇಶದ ಬೆನ್ನೆಲುಬು ಅಂತಾರೆ. ಅಂತಹ ರೈತರ ಎಲುಬನ್ನ ಕಾಂಗ್ರೆಸ್ ಮುರಿದಿದೆ. ಕಾಂಗ್ರೆಸ್ನವರು ಗ್ರಾಮೀಣ ಕುಲಕಸುಬನ್ನ ಕಸಿದುಕೊಂಡಿದ್ದಾರೆ. ನಮ್ಮ ಸರ್ಕಾರ ಬಡವರ ಪರ, ಗ್ರಾಮೀಣ ಜನರಿಗೆ ಉಪಯೋಗವಾಗುವ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮವನ್ನು ಅಭಿವೃದ್ಧಿ ಮಾಡಲು ನೂತನ ಗ್ರಾಪಂ ಸದಸ್ಯರು ಶ್ರಮಿಸಬೇಕು” ಎಂದು ಸಲಹೆ ನೀಡಿದರು.ನಂತರ ಮಾತನಾಡಿದ, ವಸತಿ ಸಚಿವ ವಿ. ಸೋಮಣ್ಣ, 15 ನೇ ಹಣಕಾಸು ಯೋಜನೆಯಲ್ಲಿ ಪ್ರತಿ ಪಂಚಾಯತಿಗೆ 1 ಕೋಟಿ ರೂಪಾಯಿಯನ್ನ ನರೇಂದ್ರ ಮೋದಿ ಕೊಡುತ್ತಿದ್ದಾರೆ. ನೂತನ ಗ್ರಾಮ ಪಂಚಾಯತಿ ಸದಸ್ಯರು ಪಿಡಿಓಗಳನ್ನು ಹದ್ದಬಸ್ತಿನಲ್ಲಿ ಇಟ್ಟುಕೊಳ್ಳಬೇಕು. ಅವಾಗ ಮಾತ್ರ ನಿಮ್ಮ ಗ್ರಾಮ ಪಂಚಾಯತಿ ಅಭಿವೃದ್ಧಿ ಆಗುತ್ತದೆ. ಪಿಡಿಓಗಳ ಕೊರಳುಪಟ್ಟಿ ಹಿಡಿದು ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ಹಿಂದೆ ಬಹಳ ಹಣವಿತ್ತು, ಈಗ ನಮ್ಮ ಬಳಿ ಹಣವಿಲ್ಲ. ಕೋವಿಡ್ ಮತ್ತು ಪ್ರವಾಹದಿಂದ ಹಣ ಇಲ್ಲದಂತಾಗಿದೆ. ಒಂದೊಂದು ಪಂಚಾಯತಿಗೆ ನಾವು 20 ಮನೆಗಳನ್ನ ಕೊಡ್ತೀವಿ. ಆ 20 ಮನೆಗಳನ್ನು ನಿಜವಾದ ಫಲನುಭವಿಗಳಿಗೆ ಮುಟ್ಟಿಸಬೇಕು. ಜನರ ಭಾವನೆಗಳಿಗೆ ಗ್ರಾಪಂ ಸದಸ್ಯರು ಸ್ಪಂದಿಸಬೇಕು ವಸತಿ ಸಚಿವರು ಹೇಳಿದರು.