ಬೆಂಗಳೂರು: “ಜಿ. ರಾಮ್.ಜಿ. ಕಾಯ್ದೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ. ನಾವು ಎಲ್ಲೂ ಕದ್ದು ಓಡಿ ಹೋಗುವುದಿಲ್ಲ. ಅಧಿವೇಶನ ಮಾಡಿ ಏನು ಮಾಡಲು ಹೊರಟಿದ್ದೀರ. ಏನು ಪ್ರಯೋಜನ ಇದೆ. ಬರೀ ಪ್ರಚಾರಕ್ಕೆ ಮಾಡುತ್ತಿದ್ದೀರಿ ಅಷ್ಟೇ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಖಾಸಗಿ ಹೊಟೇಲ್ನಲ್ಲಿ ಬಿಜೆಪಿ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಡಿಸಿಎಂ ಅವರು ಬಹಿರಂಗ ಚರ್ಚೆಗೆ ಬರಲು ಹೇಳಿದ್ದಾರೆ. ನಾವು ಸಿದ್ಧರಿದ್ದೇವೆ. ಕದ್ದು ಓಡಿ ಹೋಗುವುದಿಲ್ಲ. ಹೊಸ ಕಾಯ್ದೆಯಲ್ಲಿ ಯಾವ ರೀತಿ ಬದಲಾವಣೆ ತಂದಿದ್ದೇವೆ. ನರೇಗಾದಲ್ಲಿ ಯಾವ ದೋಷ ಇತ್ತು ಎಂಬ ಬಗ್ಗೆ ಚರ್ಚೆ ಮಾಡೋಣ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಕೇಂದ್ರ ಸರ್ಕಾರ ಪ್ರಮುಖ ನಿರ್ಣಯ ಕೈಗೊಂಡಿದೆ. ವಿಬಿ ಜಿ. ರಾಮ್.ಜಿ ಕಾಯ್ದೆ ಜಾರಿ ಮಾಡಿದೆ. ರಾಜ್ಯದಲ್ಲಿ ಈ ಬಗ್ಗೆ ದೊಡ್ಡ ಮಡ್ಡದ ಅಪಪ್ರಚಾರ ನಡೆಯುತ್ತಿದೆ. 2005ರಲ್ಲಿ ಆರಂಭವಾದ ಮನರೇಗಾ ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಮಹಾತ್ಮ ಗಾಂಧಿ ಹೆಸರು ತೆಗೆಯಲಾಗಿದೆ ಎಂದು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್ ಸುದೀರ್ಘ ಆಡಳಿತ ನಡೆಸಿದೆ. ಯಾವುದಾದರು ಪ್ರಮುಖ ಯೋಜನೆಗಳಿಗೆ ಎಷ್ಟು ಮಹಾತ್ಮ ಗಾಂಧಿ ಹೆಸರು ಇಟ್ಟಿದ್ದಾರೆ. ಅವರಿಗೆ ಮಹಾತ್ಮ ಗಾಂಧಿ ಮೇಲೆ ಗೌರವ ಇದ್ದರೆ. ರಾಜ್ಯದಲ್ಲಿ ಎಷ್ಟು ಯೋಜನೆಗಳಿಗೆ ಹೆಸರು ಇಟ್ಟಿದ್ದಾರೆ” ಎಂದು ಪ್ರಶ್ನಿಸಿದರು.![]()
“ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ದಿನದ ಅಧಿವೇಶನ ಕರೆಯುತ್ತೇವೆ ಅಂದಿದ್ದಾರೆ. ಕ್ಷೇತ್ರವಾರು 5-10 ಕಿ.ಮೀ. ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ. ಯಾವ ರೀತಿಯಲ್ಲಿ ಜಿ. ರಾಮ್. ಜಿ. ಯೋಜನೆಯಿಂದ ಜನಸಾಮಾನ್ಯರಿಗೆ, ಕೂಲಿಕಾರ್ಮಿಕರಿಗೆ ಅನ್ಯಾಯ ಆಗುತ್ತದೆ?. 2005ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಯೋಜನೆ ತಂದಿರುವುದು ತಪ್ಪು ಅನ್ನೋದಿಲ್ಲ. ಅವತ್ತು ಬಡವರಲ್ಲಿ ನಿರುದ್ಯೋಗದ ಸ್ಥಿತಿ ಇತ್ತು. ಒಳ್ಳೆ ಉದ್ದೇಶದಿಂದಲೇ ತಂದಿದ್ದರು. ಆದರೆ ನಂತರದ ದಿನಗಳಲ್ಲಿ ಈ ಯೋಜನೆ ಎಷ್ಟರ ಮಟ್ಟಿಗೆ ಮಹಾತ್ಮ ಗಾಂಧಿಗೆ ಗೌರವ ತರುವಲ್ಲಿ ಭ್ರಷ್ಟ ರಹಿತವಾಗಿ ಯೋಜನೆ ಜಾರಿಗೆ ತರಲಾಗಿದೆ?”.
“ಈ ಯೋಜನೆಗಳ ಹೆಸರಲ್ಲಿ ಕಳ್ಳ ಬಿಲ್ ಮಾಡಿ, ಕೆಲಸವನ್ನೇ ಮಾಡದೇ, ಎರಡೆರಡು ಬಾರಿ ಬಿಲ್ ಮಾಡಿ, ಉಳ್ಳವರು ಇದನ್ನು ನಿರುದ್ಯೋಗ ಹೆಸರಲ್ಲಿ ದುರ್ಬಳಕೆ ಮಾಡಿದ್ದಾರೆ. ಆ ವರದಿ ಆಧಾರದಲ್ಲಿ ಈ ತಿದ್ದುಪಡಿ ತಂದು ಜಾರಿ ಮಾಡಲಾಗಿದೆ. ಈಗ ಉತ್ತಮ ರೀತಿಯಲ್ಲಿ ಯೋಜನೆ ಅನುಷ್ಠಾನ ಮಾಡಲು ತೀರ್ಮಾನಿಸಲಾಗಿದೆ. ಮನರೇಗಾದಲ್ಲಿ ರಾಜ್ಯದಲ್ಲೇ ಹಲವು ಸಮಸ್ಯೆಗಳು ಆಗಿವೆ. ಕೊಪ್ಪಳದಲ್ಲಿ ಕೂಲಿ ಕೊಟ್ಟಿಲ್ಲ ಅಂತ ಗಲಾಟೆ ನಡೆದು ಬಳಿಕ ಪೊಲೀಸರು ಜೊತೆ ಲಾಠಿ ಚಾರ್ಜ್ ನಡೆಸಿದ್ದು. ನರೇಗಾ ಕೆಲಸಕ್ಕೆ ಎಂದು ಕಾರ್ಮಿಕರು ಟ್ರ್ಯಾಕ್ಟರ್ನಲ್ಲಿ ಹೋಗುತ್ತಿದ್ದರು. ಅದು ಅವಘಡ ಆಗಿ ಇಬ್ಬರು ಮೂವರು ಅಸುನೀಗುತ್ತಾರೆ. ಆದರೆ, ಅವರ ಹೆಸರಲ್ಲಿ ಯಾವುದೇ ಜಾಬ್ ಕಾರ್ಡ್ ಇದ್ದಿಲ್ಲ. ಜಾಬ್ ಕಾರ್ಡ್ನಲ್ಲಿ ಅವ್ಯವಹಾರ ಆಗಿದೆ. 60 ವರ್ಷ ಮೇಲ್ಪಟ್ಟವರಿಗೆ ಜಾಬ್ ಕಾರ್ಡ್ ಮಾಡಿಸಲಾಗಿದೆ. ಇದನ್ನೆಲ್ಲ ಪರಿಗಣಿಸಿ ಕೇಂದ್ರ ಈ ತಿದ್ದುಪಡಿ ಮಾಡಿದೆ”.
Laxmi News 24×7