ಪೋಷಕರ ತ್ಯಾಗ ಮರೆಯದಿರಿ: ಬೆಳಗಾವಿಯಲ್ಲಿ ಯುವಜನತೆಗೆ ವಸಂತ ಹಂಕಾರೆ ಕಿವಿಮಾತು
ಶ್ರೀರಾಮ ಸೇನಾ ಹಿಂದೂಸ್ಥಾನದ ವತಿಯಿಂದ ವಿಶೇಷ ಉಪನ್ಯಾಸ
“ನಮ್ಮನ್ನು ಬೆಳೆಸಲು ಪೋಷಕರು ತಮ್ಮ ಸುಖವನ್ನೇ ತ್ಯಾಗ ಮಾಡುತ್ತಾರೆ, ಆದರೆ ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ವ್ಯಸನಗಳಿಗೆ ಬಲಿಯಾಗಿ ಅವರನ್ನೇ ಮರೆಯುತ್ತಿದೆ” ಎಂದು ಪ್ರಸಿದ್ಧ ಸಮಾಜ ಸುಧಾರಕ ವಸಂತ ಹಂಕಾರೆ ಅವರು ಯುವಜನತೆಗೆ ಎಚ್ಚರಿಕೆ ನೀಡಿದರು.
ಶ್ರೀರಾಮ ಸೇನಾ ಹಿಂದೂಸ್ಥಾನದ ವತಿಯಿಂದ ಶನಿವಾರ ಆರ್ಪಿಡಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಹಂಕಾರೆ ಅವರ ಪ್ರಭಾವಶಾಲಿ ಮಾತುಗಳನ್ನು ಕೇಳಿ ಅಲ್ಲಿದ್ದ ಸಾವಿರಾರು ವಿದ್ಯಾರ್ಥಿಗಳ ಕಣ್ಣಾಲಿಗಳು ತೇವಗೊಂಡವು.ಶ್ರೀರಾಮ ಸೇನಾ ಹಿಂದೂಸ್ಥಾನದ ಅಧ್ಯಕ್ಷ ರಮಾಕಾಂತ್ ಕೊಂಡುಸ್ಕರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದ ಮುಖ್ಯ ವಿಷಯ ‘ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಅನುಭವಿಸುವ ನೋವು’ ಎನ್ನುವುದಾಗಿತ್ತು. ಇಂದಿನ ಯುವ ಪೀಳಿಗೆ ದೈಹಿಕ ಮತ್ತು ಮಾನಸಿಕ ಒತ್ತಡದಲ್ಲಿ ಬದುಕುತ್ತಿದ್ದು, ಆತ್ಮಹತ್ಯೆ, ವ್ಯಸನ ಮತ್ತು ನೈತಿಕ ಅಧಃಪತನದಂತಹ ಸಮಸ್ಯೆಗಳಿಗೆ ಬಲಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಂಾರೆ ಅವರು ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿದರು.
ಉಪನ್ಯಾಸದ ವೇಳೆ ಹಂಕಾರೆ ಅವರು ಪೋಷಕರ ಶ್ರಮ ಮತ್ತು ಅವರ ನಿರೀಕ್ಷೆಗಳ ವಾಸ್ತವವನ್ನು ಬಿಚ್ಚಿಟ್ಟಾಗ, ಅನೇಕ ವಿದ್ಯಾರ್ಥಿಗಳು ಭಾವುಕರಾದರು. ಕೆಲವು ವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಇಂದಿನಿಂದ ಪೋಷಕರನ್ನು ಗೌರವಿಸುವ ಮತ್ತು ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸುವ ಸಂಕಲ್ಪ ಮಾಡಿದರು.ವಸಂತ ಹಂಕಾರೆ ಅವರು ತಮ್ಮ ಶೈಲಿಯಲ್ಲಿ ಯುವಜನತೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಮತ್ತು ದಾರಿತಪ್ಪುತ್ತಿರುವ ಪ್ರವೃತ್ತಿಯ ಬಗ್ಗೆ ಬೆಳಕು ಚೆಲ್ಲಿದರು. “ಸಂಸ್ಕಾರ ಮತ್ತು ಧರ್ಮವಿಲ್ಲದ ಜೀವನದಿಂದಾಗಿ ಯುವಜನತೆ ದಾರಿ ತಪ್ಪುತ್ತಿದೆ. ಪೋಷಕರ ನಿರ್ಲಕ್ಷ್ಯ ಮತ್ತು ಮಕ್ಕಳ ಅತಿಯಾದ ಸ್ವಾತಂತ್ರ್ಯದಿಂದ ಕೌಟುಂಬಿಕ ಸಂಬಂಧಗಳು ಹದಗೆಡುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅನೇಕ ವಿದ್ಯಾರ್ಥಿಗಳು ತಮ್ಮ ಪೋಷಕರ ನೆನಪಿನಲ್ಲಿ ಕಣ್ಣೀರಿಟ್ಟರು. “ನಾವು ಇಷ್ಟು ದಿನ ಮೊಬೈಲ್ ಮತ್ತು ಸ್ನೇಹಿತರ ಲೋಕದಲ್ಲಿ ಮುಳುಗಿ ಪೋಷಕರ ಕಷ್ಟಗಳನ್ನು ಗಮನಿಸಿರಲಿಲ್ಲ” ಎಂದು ಕೆಲವು ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಒಪ್ಪಿಕೊಂಡರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ರಮಾಕಾಂತ್ ಕೊಂಡೂಸ್ಕರ್ ಅವರು, “ಕೇವಲ ಶಿಕ್ಷಣ ಪಡೆದರೆ ಸಾಲದು, ಮಕ್ಕಳಲ್ಲಿ ನೈತಿಕ ಮೌಲ್ಯಗಳು ಬೆಳೆಯುವುದು ಇಂದಿನ ಕಾಲದ ಅಗತ್ಯವಾಗಿದೆ. ಸಮಾಜದಲ್ಲಿನ ಈ ಕೊರತೆಯನ್ನು ನೀಗಿಸಲು ಇಂತಹ ಪ್ರಬೋಧನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ”
ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಬೆಳಗಾವಿ ನಗರದ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು. ಆರ್ಪಿಡಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮವು ಯುವಜನತೆಗೆ ಹೊಸ ದಿಕ್ಕನ್ನು ತೋರಿಸುವಂತಿದೆ ಎಂದು ನೆರೆದಿದ್ದವರು ಅಭಿಪ್ರಾಯಪಟ್ಟರು.
ಇನ್ನು ಉಪನ್ಯಾಸ ಕೇಳಿದ ಮಕ್ಕಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು
Laxmi News 24×7