ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಇನ್ನೂ ಎರಡು ವರ್ಷ ನಾನೇ ಇರುವೆ ಎಂದು ಪದೇಪದೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳುತ್ತಲೇ ಇದ್ದಾರೆ. ಆದರೆ ಈ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಡಿಕೆಶಿ, ಬಿಜೆಪಿ ಶಾಸಕರೇ ಬೇರೆ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟುಕೊಳ್ಳುವ ಸ್ಥಿತಿ ಎದುರಾಗಿದೆ ಎಂದರೆ ಎಲ್ಲೋ ಏನೋ ಎಡವಟ್ಟಾಗಿದೆ, ಅಪಾಯ ಎದುರಾಗಿದೆ ಎಂಬ ಅನುಮಾನ ಮೂಡುತ್ತದೆ ಎಂದರುಸಿಎಂ ಆದವರು ನಾನೇ ಇನ್ನೂ 2 ವರ್ಷ ಅಧಿಕಾರದಲ್ಲಿರುತ್ತೇನೆ ಎನ್ನುವ ಅಗತ್ಯವೇನಿದೆ? ಮುಖ್ಯಮಂತ್ರಿಗಳು ತಮಗೆ ತಾವೇ ಪ್ರಮಾಣಪತ್ರ ಕೊಟ್ಟುಕೊಳ್ಳುತ್ತಿರುವುದೇಕೆ? ಅವರ ಅಧಿಕಾರದ ಬಗ್ಗೆ ನಾವೇನಾದರೂ ಪ್ರಶ್ನಿಸಿದ್ದೇವಾ? ಹಾಗಿದ್ದರೂ ಈ ಬಗ್ಗೆ ಸ್ಪಷ್ಟತೆ ನೀಡುವ ಅಗತ್ಯ ಏನಿದೆ? ಎಂದು ಡಿಕಿಶಿ ಕಿಡಿಕಾರಿದರು.
ಗ್ರಾಮ ಪಂಚಾಯಿತಿ ಫಲಿತಾಂಶದ ಬಗ್ಗೆ ಮತ್ತೊಮ್ಮೆ ಅಭಿಪ್ರಾಯ ಪುನರುಚ್ಛರಿಸಿದ ಅವರು, ಈ ಫಲಿತಾಂಶದಿಂದ ನಮಗೆ ಸಮಾಧಾನವಾಗಿದೆ. ಅಧಿಕಾರವಿದೆ ಎಂದು ಕೆಲವರು ನಮ್ಮವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ ನಮಗೆ ಉತ್ತಮ ಫಲಿತಾಂಶ ಸಿಕ್ಕಿದೆ. ಹಳ್ಳಿ ಜನ ಆಪರೇಷನ್ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದರು.