ಕೊಪ್ಪಳ: 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಪ್ರಕಟಿಸಿದ್ದು, ಜಿಲ್ಲೆಯ ಮೂವರಿಗೆ ಪ್ರಶಸ್ತಿ ಘೋಷನೆಯಾಗಿದೆ. ಕುಷ್ಟಗಿ ತಾಲೂಕಿನ ತೆಗ್ಗಿಹಾಳ ಗ್ರಾಮದ ಬಸಪ್ಪ ಬರಮಪ್ಪ ಚೌಡ್ಕಿ, ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ದೇವೇಂದ್ರ ಕುಮಾರ ಪತ್ತಾರ ಹಾಗು ಕೊಪ್ಪಳದ ಶೇಕರಗೌಡ ವಿ ಮಾಲಿ ಪಾಟೀಲ್ ಅವರಿಗೆ ಪ್ರಶಸ್ತಿ ಒಲಿದಿದೆ. ಈ ಪ್ರಶಸ್ತಿ 5 ಲಕ್ಷ ರೂ ನಗದು, 25 ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಫಲಕ ಒಳಗೊಂಡಿದೆ.
ಬಸಪ್ಪ ಬರಮಪ್ಪ ಚೌಡ್ಕಿ: ಜನಪದ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಬಸಪ್ಪ ಬರಮಪ್ಪ ಚೌಡ್ಕಿ ಅವರಿಗೆ ಪ್ರಶಸ್ತಿ ಬಂದಿದೆ. ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಗಿಹಾಳ ಗ್ರಾಮದವರು. ಬಸಪ್ಪ ವಂಶಪಾರಂಪರ್ಯವಾಗಿ ಬಂದ ಚೌಡಿಕೆ ಪದಗಳನ್ನು ಕರಗತ ಮಾಡಿಕೊಂಡಿದ್ದರು. ಬಾಲ್ಯದಿಂದಲೇ ಹಾಡುತ್ತಾ, ತುಂತುಣಿ ವಾದ್ಯಗಳನ್ನು ನುಡಿಸುತ್ತಾ ಮೂಲ ಚೌಡಿಕೆ ಪದಗಳನ್ನು ಉಳಿಸುತ್ತಾ ಬಂದಿದ್ದಾರೆ. ಚೌಡಕಿ ಪದಗಳಲ್ಲದೇ ಗೀಗೀ ಪದ, ರಿವಾಯತ್ ಪದ, ತತ್ವ ಪದ, ಶ್ರೀ ಕೃಷ್ಣ ಪಾರಿಜಾತದಲ್ಲಿ ರಾದೆಯಾಗಿ, ಅಲ್ಲದೇ ನೂರು ಸಣ್ಣಾಟಗಳಲ್ಲಿ ಅಭಿನಯಿಸಿದ್ದಾರೆ. ಬಸಪ್ಪ ಬರಮಪ್ಪ ಚೌಡ್ಕಿ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಸಂದಿದೆ. ಅಲ್ಲದೇ ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರುತಿಸಿ ಗೌರವಿಸಿವೆ.
ದೇವೇಂದ್ರ ಕುಮಾರ ಪತ್ತಾರ: ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ದೇವೇಂದ್ರ ಕುಮಾರ ಪತ್ತಾರ ಅವರಿಗೆ ಪ್ರಶಸ್ತಿ ಘೋಷಣೆಯಾಗಿದೆ. ಪತ್ತಾರರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ತಾಲೂಕಿನಲ್ಲಿ 1955ರಲ್ಲಿ ಜನಿಸಿದ್ದು, ಡಾ.ಪಂ.ಪುಟ್ಟರಾಜ ಗವಾಯಿ ಅವರ ಶಿಷ್ಯರಾಗಿದ್ದರು. ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ಸುಗಮ ಸಂಗೀತವನ್ನು ಗ್ವಾಲಿಯರ್ ಗರಾಣ ಪದ್ಧತಿಯಲ್ಲಿ ಕಲಿತಿದ್ದಾರೆ. ಆಕಾಶವಾಣಿಯ ಧಾರವಾಡ-ಕಲಬುರಗಿ ಕೇಂದ್ರದ ‘ಬಿ’ ಹೈಗ್ರೇಡ್ ಕಲಾವಿದರಾಗಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಯವರ ಹೆಸರಿನಲ್ಲಿ ಸಂಗೀತ ಶಾಲೆ ಆರಂಭಿಸಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಸಂಗೀತ ತರಬೇತಿ ನೀಡಿದ್ದಾರೆ. ಪತ್ತಾರ ಅವರು ಕರ್ನಾಟಕ ಕಲಾಶ್ರೀ ಪುರಸ್ಕಾರ, ಶ್ರೀ ಗುರು ಪುಟ್ಟರಾಜ ಸನ್ಮಾನ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.
Laxmi News 24×7