ಬೆಂಗಳೂರು: ತನ್ನಿಬ್ಬರು ಮಕ್ಕಳನ್ನು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಗುಂಟೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ. ಬೃಂದಾ (4) ಹಾಗೂ ಭುವನ್ (1) ಕೊಲೆಗೀಡಾದ ಮಕ್ಕಳು. ವಿಜಯಲಕ್ಷ್ಮಿ (35) ಆತ್ಮಹತ್ಯೆ ಮಾಡಿಕೊಂಡ ತಾಯಿ.
ಗುರುವಾರ ರಾತ್ರಿ ವಿಜಯಲಕ್ಷ್ಮಿ ಅವರ ಸಹೋದರಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ರಾಯಚೂರಿನವರಾದ ವಿಜಯಲಕ್ಷ್ಮಿ ಹಾಗೂ ರಮೇಶ್ ಐದು ವರ್ಷದ ಹಿಂದೆ ಮದುವೆಯಾಗಿದ್ದರು. ರಮೇಶ್ ಮಾಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ತಾನು ಮತ್ತೊಂದು ಮದುವೆಯಾಗಿದ್ದೇನೆ ಎನ್ನುತ್ತಿದ್ದ ರಮೇಶ್, ವಿಚ್ಛೇದನ ನೀಡುವಂತೆ ಪತ್ನಿಗೆ ಬೆದರಿಕೆ ಹಾಕುತ್ತಿದ್ದ ಎಂದು ಆಕೆಯ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಇದೇ ವಿಚಾರವಾಗಿ ಪದೇ ಪದೇ ಕುಟುಂಬದಲ್ಲಿ ಜಗಳವಾಗುತ್ತಿತ್ತು. ವಿಜಯಲಕ್ಷ್ಮಿ ಈ ವಿಚಾರವನ್ನು ಸಾಕಷ್ಟು ಬಾರಿ ಹೇಳಿಕೊಂಡಿದ್ದರು. ಇದರಿಂದಲೇ ನೊಂದು ತನ್ನ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ನ ವಾಷ್ ರೂಮ್ನಲ್ಲಿ ಶವವಾಗಿ ಪತ್ತೆಯಾದ ಬ್ಯಾಂಕ್ ಮ್ಯಾನೇಜರ್: ಸ್ನೇಹಿತರೊಂದಿಗೆ ಪಬ್ಗೆ ತೆರಳಿದ್ದ ವ್ಯಕ್ತಿಯೋರ್ವ ವಾಷ್ ರೂಮ್ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ತಡರಾತ್ರಿ ಆರ್.ಆರ್.ನಗರದಲ್ಲಿ ನಡೆದಿದೆ. ಮೇಘರಾಜ್ (31) ಮೃತ ದುರ್ದೈವಿಯಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬರಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಣ್ಣ ಫೈನಾನ್ಸ್ವೊಂದರಲ್ಲಿ ಮ್ಯಾನೇಜರ್ ಆಗಿದ್ದ ಮೇಘರಾಜ್ ತಡರಾತ್ರಿ ತನ್ನ ಮೂವರು ಸ್ನೇಹಿತರೊಂದಿಗೆ ಪಬ್ಗೆ ತೆರಳಿದ್ದರು. ಊಟ ಮುಗಿಸಿ, ಬಿಲ್ ಪಾವತಿಸಿದ ಬಳಿಕ ವಾಷ್ ರೂಮ್ಗೆ ಹೋಗಿ ಬರುವುದಾಗಿ ಹೇಳಿದ್ದರು. ತುಂಬಾ ಸಮಯ ಕಳೆದರೂ ಬರದಿದ್ದಾಗ ಅವರ ಸ್ನೇಹಿತರು ಹೋಗಿ ಪರಿಶೀಲಿಸಿದ್ದಾರೆ. ವಾಷ್ ರೂಮ್ ಬಾಗಿಲು ಮುರಿದು ಒಳಗೆ ತೆರಳಿದಾಗ ಮೇಘರಾಜ್ ಶವ ಪತ್ತೆಯಾಗಿತ್ತು.
ಮೇಘರಾಜ್ ಅವರಿಗೆ ಪತ್ನಿ ಹಾಗೂ ಆರು ತಿಂಗಳ ಮಗು ಇದೆ. ಘಟನಾ ಸ್ಥಳಕ್ಕೆ ಸೋಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತನ ಸಹೋದರ ವಿನಯ್ ನೀಡಿರುವ ದೂರಿನನ್ವಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7