ಬೆಳಗಾವಿ: ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೈಲಹೊಂಗಲ ತಾಲೂಕಿನಿಂದ ಇದೇ ಮೊದಲ ಬಾರಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ. ಇವರ ಸ್ಪರ್ಧೆಯಿಂದ ಬೈಲಹೊಂಗಲದಲ್ಲಿ ಚುನಾವಣಾ ಕಣ ರಂಗೇರಿದೆ.
ಬೆಳಗಾವಿಯ ಡಿಸಿಸಿ ಬ್ಯಾಂಕಿಗೆ ತಮ್ಮ ಆಪ್ತರೊಂದಿಗೆ ಆಗಮಿಸಿದ ಡಾ. ವಿಶ್ವನಾಥ ಪಾಟೀಲ ನಾಮಪತ್ರ ಸಲ್ಲಿಸಿದರು. ಈ ವೇಳೆ ಮುಖಂಡರಾದ ಪರ್ವತಗೌಡ ಪಾಟೀಲ, ಆನಂದ ಮೂಗಿ, ಬಾಳನಗೌಡ ಪಾಟೀಲ, ಚನ್ನಪ್ಪ ಹೊಳೆಪ್ಪನವರ, ಬಾಬುರಾವ ಬೋಳಶೆಟ್ಟಿ ಸೇರಿ ಮತ್ತಿತರರು ಇದ್ದರು.ಈ ಮೊದಲು ಬೈಲಹೊಂಗಲ ಮತ್ತು ಕಿತ್ತೂರು ತಾಲೂಕು ಸೇರಿ ಓರ್ವ ನಿರ್ದೇಶಕ ಸ್ಥಾನ ಇತ್ತು. ಕಳೆದ ಹಲವು ಅವಧಿಗಳವರೆಗೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅವಿರೋಧವಾಗಿ ಆಯ್ಕೆ ಆಗುತ್ತಾ ಬಂದಿದ್ದರು. ಈ ಬಾರಿ ಮತ್ತೆ ಅವಿರೋಧ ಆಯ್ಕೆ ಬಯಸಿದ್ದ ದೊಡ್ಡಗೌಡರಗೆ ಡಾ. ವಿಶ್ವನಾಥ ಪಾಟೀಲ ಸೆಡ್ಡು ಹೊಡೆದಿದ್ದಾರೆ. ಹಾಗಾಗಿ, ಇಬ್ಬರು ಮಾಜಿ ಶಾಸಕರ ನಡುವಿನ ಹಣಾಹಣಿಗೆ ಬೈಲಹೊಂಗಲ ಸಾಕ್ಷಿ ಆಗಲಿದೆ. ಮಹಾಂತೇಶ ದೊಡ್ಡಗೌಡರ ಬಾಲಚಂದ್ರ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದು, ಡಾ.ವಿಶ್ವನಾಥ ಪಾಟೀಲ ಸ್ವತಂತ್ರವಾಗಿ ಕಣಕ್ಕೆ ಇಳಿದಿದ್ದಾರೆ.
ಬೈಲಹೊಂಗಲ ಮತ್ತು ಕಿತ್ತೂರಿಗೆ ಪ್ರತ್ಯೇಕವಾಗಿ ಎರಡು ನಿರ್ದೇಶಕ ಸ್ಥಾನಗಳು ಸಿಕ್ಕಿವೆ. ಹಿಂದೆ ಬಹುತೇಕ ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ಆಗುತ್ತಿತ್ತು. ಆದರೆ, ಬದಲಾದ ರಾಜಕಾರಣದಲ್ಲಿ ಹೊಸ ಅಭ್ಯರ್ಥಿಗಳು ಆಯ್ಕೆ ಬಯಸಿದ್ದಾರೆ. ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಮತ್ತು ಅವರ ತಂಡ ಡಿಸಿಸಿ ಬ್ಯಾಂಕಿನಲ್ಲಿ ಮಾಜಿ ಅಧ್ಯಕ್ಷ ರಮೇಶ ಕತ್ತಿ ಹಿಡಿತ ತಪ್ಪಿಸಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಅಲ್ಲದೇ ನಮಗೆ 12 ಸ್ಥಾನ ಸಿಗಲಿದ್ದು, ಅಧ್ಯಕ್ಷ, ಉಪಾಧ್ಯಕ್ಷರು ನಮ್ಮವರೇ ಆಗುತ್ತಾರೆ ಎಂದು ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕೌಂಟರ್ ಕೊಟ್ಟಿರುವ ರಮೇಶ ಕತ್ತಿ ನಾನು ಗೆಲ್ಲುವ ಜೊತೆಗೆ ನನ್ನ ಸಮಾನಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರುವುದು ನಿಶ್ಚಿತ. ಬ್ಯಾಂಕ್ ಉಳಿಸಲು ಜಿಲ್ಲೆಯ ಮತದಾರರು ಒಳ್ಳೆಯ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕರೆ ನೀಡಿದ್ದಾರೆ.
ಅ.4ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದ್ದು, ಅ.11 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಅ.12ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.13 ನಾಮಪತ್ರ ಹಿಂಪಡೆಯಲು ಕೊನೆಯ ದಿನ ಆಗಿದೆ. ಅ.19ರಂದು ಚುನಾವಣೆ ನಡೆಯಲಿದ್ದು, ಅವತ್ತೇ ಫಲಿತಾಂಶ ಕೂಡ ಪ್ರಕಟ ಆಗಲಿದೆ. 15 ತಾಲೂಕುಗಳಿಂದ 15, ಇತರೆ ಓರ್ವ ಸೇರಿ ಒಟ್ಟು 16 ನಿರ್ದೇಶಕರ ಆಯ್ಕೆಗೆ ಈ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಯೂ ಆಗಿರುವ ಬೆಳಗಾವಿ ಎಸಿ ಶ್ರವಣ ನಾಯಿಕ ತಿಳಿಸಿದ್ದಾರೆ.
Laxmi News 24×7