ನವದೆಹಲಿ: ದಾವಣಗೆರೆಯ ಕುಂಬಳೂರಿನ ಸಣ್ಣ ಹಳ್ಳಿಯೊಂದರ ರೈತ ದೇವೇಂದ್ರಪ್ಪ ಅವರನ್ನು ಪ್ರತಿಷ್ಟಿತ ‘ಸಂತ ಈಶ್ವರ್ ಸಮ್ಮಾನ್ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ದೆಹಲಿಯ ಪುಸಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಸಿಂಗ್ ಯಾದವ್ ಅವರು ದೇವೇಂದ್ರಪ್ಪರನ್ನು ಸನ್ಮಾನಿಸಲಿದ್ದಾರೆ.
ಈ ಕುರಿತು ದೇವೇಂದ್ರಪ್ಪ ಅವರು , “ನನ್ನಲ್ಲಿ 15ಕ್ಕೂ ಹೆಚ್ಚು ಸುಧಾರಿತ ಭತ್ತದ ತಳಿಗಳಿವೆ. ಮುಖ್ಯವಾಗಿ ಡಿಡಿ ಚಾರ್ ಅಕ್ಕಿ ಬೆಳೆಯುತ್ತೇನೆ. ಈ ಅಕ್ಕಿ ಪೌಷ್ಟಿಕ ಮತ್ತು ಔಷಧೀಯ ಸತ್ವಗಳನ್ನು ಹೊಂದಿದೆ. ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಉತ್ತರಾಖಂಡದ ಸ್ಥಳೀಯ ರೈತರು, ಗ್ರಾಹಕರು, ಯುವ ಸಾವಯವ ರೈತರು ಮತ್ತು ಸ್ಥಳೀಯ ಅಕ್ಕಿಯ ಗ್ರಾಹಕರೂ ಸೇರಿದಂತೆ ಸುಮಾರು 500 ಕುಟುಂಬಗಳು ನಮ್ಮೊಂದಿಗೆ ವ್ಯವಹಾರ ನಡೆಸುತ್ತಿವೆ” ಎಂದು ತಿಳಿಸಿದರು.”
ರಾಸಾಯನಿಕ ಗೊಬ್ಬರ ಬಳಸದೇ ಭತ್ತ ಬೆಳೆದು ನಾವು ಎಕರೆಗೆ 1.5 ಲಕ್ಷ ರೂಪಾಯಿಗಳವರೆಗೂ ಗಳಿಸುತ್ತೇವೆ. ನಮ್ಮ ಸಾವಯವ ಕೃಷಿ ವಿಧಾನಗಳು ಭತ್ತದಲ್ಲಿ ಔಷಧೀಯ ಗುಣಗಳನ್ನು ಹೆಚ್ಚಿಸುತ್ತವೆ. 2010ರಿಂದ ನವರಾ, ರಕ್ತಶಾಲಿ ಮತ್ತು ಬರ್ಮಾ ಬ್ಲಾಕ್ ಸೇರಿದಂತೆ 12 ವಿಧದ ಸ್ಥಳೀಯ ಅಕ್ಕಿಯನ್ನು ಸಂರಕ್ಷಿಸಿ ಪ್ರಚಾರ ಮಾಡುತ್ತಿದ್ದೇನೆ. ಅವುಗಳ ಔಷಧೀಯ ಮತ್ತು ಪೌಷ್ಟಿಕ ಗುಣಗಳು ಗ್ರಾಹಕರಿಗೆ ಪ್ರಯೋಜನ ನೀಡುತ್ತಿವೆ. ನನ್ನ ಕೆಲಸ ಮತ್ತು ತೋಟವನ್ನು ನೋಡಿ ಸಮಾಜದಲ್ಲಿ ಸಾವಯವ ಕೃಷಿಗೆ ಉತ್ತೇಜನ ದೊರೆತಿದೆ” ಎಂದು ಮಾಹಿತಿ ನೀಡಿದರು.
Laxmi News 24×7