ಮೈಸೂರು: ಅರಮನೆ ಆವರಣದಲ್ಲಿ ಇದ್ದ ಗಜಪಡೆ ವಾಸ್ತವ್ಯ ತಳಕ್ಕೆ ಯುವತಿಯೋರ್ವಳು ಅಕ್ರಮವಾಗಿ ಪ್ರವೇಶ ಮಾಡಿ ದಸರಾ ಆನೆಯೊಂದಿಗೆ ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೆ ನೋಡಿಕೊಳ್ಳುವ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೂಚನೆಯಲ್ಲೇನಿದೆ: ‘ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಅಭಿಮನ್ಯು, ಭೀಮ ಸೇರಿದಂತೆ ಸಾಕಾನೆಗಳ ಜೊತೆ ಫೋಟೋ, ವಿಡಿಯೋ, ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 18ರಂದು ಯುವತಿಯೊಬ್ಬರು ರೀಲ್ಸ್ ಮಾಡಿರುವ ಹಿನ್ನೆಲೆಯಲ್ಲಿ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಮಾಧ್ಯಮಗಳಲ್ಲಿ ಸಚಿತ್ರ ವರದಿ ಪ್ರಕಟವಾಗಿರುತ್ತದೆ”.
“ಈ ಹಿಂದೆ 23.09.2024ರ ಟಿಪ್ಪಣಿ ಸಂಖ್ಯೆ 948/2024-25ರಲ್ಲಿ ಆನೆ ಶಿಬಿರಗಳಿಂದ ಮೈಸೂರಿಗೆ ತಂದಿರುವ ಆನೆಗಳನ್ನು ಮತ್ತೆ ಶಿಬಿರಕ್ಕೆ ಬಿಡುವವರೆಗೆ ಯಾವುದೇ ಅನಾಹುತ ಆಗದಂತೆ ಎಚ್ಚರ ವಹಿಸಲು ಮತ್ತು ರೀಲ್ಸ್ ಮಾಡಲು ಅವಕಾಶ ನೀಡಿ ನಿರ್ಲಕ್ಷ್ಯ ತೋರಿರುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿ ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲು ಸೂಚಿಸಲಾಗಿತ್ತು. ಆದರೂ ಇಂತಹ ಘಟನೆ ಪುನರಾವರ್ತನೆ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ”.
“ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಇದೇ ದಿನಾಂಕ ಸೆ. 19 ರಂದು ನೀಡಿರುವ ಪತ್ರಿಕಾ ಪ್ರಕಟಣೆ ಸಂಖ್ಯೆ ಎ/ಬಿಯುಡಿ/ಸಿಆರ್-13/ದಸರಾ-25/2025-26ರಲ್ಲಿ ಯುವತಿ ಸೆ.18ರ ರಾತ್ರಿ ಸಿಬ್ಬಂದಿಯ ಕಣ್ಣು ತಪ್ಪಿಸಿ ಆನೆ ಸಮೀಪ ಹೋಗಿರುವುದಾಗಿ ತಿಳಿಸಲಾಗಿದೆ. ಇದು ಸಿಬ್ಬಂದಿ ಮತ್ತು ಆನೆಗಳ ಜವಾಬ್ದಾರಿ ಹೊತ್ತ ಅಧಿಕಾರಿಗಳ ಕರ್ತವ್ಯ ಲೋಪ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ”.
“ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಹಾಗೂ ಯುವತಿಯನ್ನು ಪತ್ತೆ ಮಾಡಿ ದಂಡ ವಿಧಿಸಿ. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸುವಂತೆ” ಪ್ರಕಟಣೆ ಸೂಚಿಸಿದೆ.
Laxmi News 24×7