ಮೈಸೂರು: ದಸರಾ ಮಹೋತ್ಸವದ ನವರಾತ್ರಿಯ ಬಣ್ಣಗಳಾದ ಬಿಳಿ, ಕೆಂಪು, ಕಡು ನೀಲಿ, ಹಳದಿ, ಹಸಿರು, ಬೂದು, ಕಿತ್ತಳೆ, ನವಿಲು ಹಸಿರು, ಗುಲಾಬಿಯ ಸೀರೆಗಳನ್ನು ತೊಟ್ಟು ಅಲಂಕಾರ ಮಾಡಿಕೊಂಡು ಬಂದಿದ್ದ ಮಂಗಳಮುಖಿಯರು ತಾವು ಯಾವ ಮಾಡೆಲ್ಗೂ ಕಮ್ಮಿ ಇಲ್ಲ ಎನ್ನುವಂತೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದ್ದಾರೆ.
ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಇಲ್ಲಿನ ಜೆ.ಕೆ.ಮೈದಾನದಲ್ಲಿ ಮೂರು ನಾಲ್ಕು ದಿನಗಳಿಂದ ನಡೆಯುತ್ತಿರುವ ಮಹಿಳಾ ದಸರಾದ ಕೊನೆಯ ದಿನ, ಮಂಗಳಮುಖಿಯರು ಕ್ಯಾಟ್ ವಾಕ್ ಮಾಡಿದರು.
ಸುಮಾರು 20ಕ್ಕೂ ಹೆಚ್ಚು ನಿಮಿಷ ವೇದಿಕೆಯಲ್ಲಿ ಹಿಮ್ಮೇಳನದ ಸಂಗೀತಕ್ಕೆ ತಕ್ಕಂತೆ ಶಿಸ್ತುಬದ್ದವಾಗಿ ಹೆಜ್ಜೆ ಹಾಕಿದರು. ಇದೇ ಮೊದಲ ಬಾರಿಗೆ ಮಂಗಳಮುಖಿಯರು ಪ್ಯಾಷನ್ ಶೋ ನೀಡಿದ್ದು, ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ನಟ ದರ್ಶನ್ ಅಭಿಯನದ ಧರ್ಮ ಚಲನಚಿತ್ರದ ‘ಕಾವ್ಯ ಪ್ರೀತಿಯ ಉಣಿಸು ದಾನವನೆದೆಗೆ..’ ಹಾಡಿಗೆ ಮಂಗಳಮುಖಿ ಪಾವನಿ, ನೃತ್ಯ ಮಾಡಿದರು.ನಂತರ ಕೊಡವ ಮಹಿಳೆಯರು, ಕಾವೇರಿ ನೀರು ಕುರಿತಾದ ನೃತ್ಯ ಮಾಡಿ, ಕೊಡಗಿನ ಸಾಂಸ್ಕೃತಿಕ ಸಿರಿಯನ್ನು ವೇದಿಕೆ ಮೇಲೆ ಪ್ರದರ್ಶಿಸಿದರು. ಗಾಯಕ ರಾಹುಲ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುರಿತಾದ ಗೀತೆಯನ್ನು ಹಾಡಿದರೆ, ಮೈಸೂರಿನ ಪಡಿಪು ಕೈಯಾಲೆ ತಂಡದ ವಿನುತ ಕೇಸರಿ ಅವರು ನೃತ್ಯ ಮಾಡಿದರು. ತಿ.ನರಸೀಪುರ, ಪಿರಿಯಾಪಟ್ಟಣ, ಮೈಸೂರು ಮಹಿಳೆಯರ ತಂಡಗಳು, ಪ್ರತ್ಯೇಕವಾಗಿ ಸಮೂಹ ನೃತ್ಯ ಮಾಡಿ ರಂಜಿಸಿದರು.
Laxmi News 24×7