ಕಟಪಾಡಿ(ಉಡುಪಿ): ಸರಿಸುಮಾರು 10 ವರ್ಷಗಳಿಂದ ನಾಗರಿಕ ಸಮಾಜದಿಂದಲೇ ದೂರ ಇದ್ದು ಅನಾಗರಿಕ ರೀತಿಯಲ್ಲಿ ವಾಸ ಮಾಡುತ್ತಿದ್ದ ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಸಮಾಜಸೇವಕರ ನೆರವಿನಿಂದ ರಕ್ಷಣೆ ಮಾಡಲಾಗಿದೆ.
ಜಿಲ್ಲೆಯ ಕಟಪಾಡಿ ಅಚ್ಚಡದ ನಿವಾಸಿ ಶ್ಯಾಮಲಾ ಪುರಾಣಿಕ್ (65) ಹಾಗೂ ಮಕ್ಕಳಾದ ನಾಗಶ್ರೀ (33) ಜಯಶ್ರೀ (36) ರಕ್ಷಿಸಲ್ಪಟ್ಟವರು.
ಶ್ಯಾಮಲ ಪುರಾಣಿಕ್ ಮನೋರೋಗದಿಂದ ಬಳಲುತ್ತಿದ್ದರು. ಜತೆಗೆ, ತಮ್ಮ ಇಬ್ಬರು ಮಂದಮತಿಯರಾದ ಹೆಣ್ಣು ಮಕ್ಕಳೊಂದಿಗೆ ಮುರುಕಲು ಮನೆಯಲ್ಲಿ ಸಮಾಜದಿಂದ ದೂರವೇ ಇದ್ದು ವಾಸವಾಗಿದ್ದರು. ನಗರದ ದೇವಸ್ಥಾನ, ಪೊಲೀಸ್ ಠಾಣೆ, ನ್ಯಾಯಾಲಯ ಹೀಗೆ ಎಲ್ಲೆಂದರಲ್ಲಿ ತಿರುಗಾಡುತ್ತಾ ಸಾರ್ವಜನಿಕರ ವಿರುದ್ಧ ಸುಳ್ಳು ದೂರು ದಾಖಲಿಸುವುದು, ನೆರೆಮನೆಯವರಿಗೆ ನಿರಂತರ ಅವಾಚ್ಯ ಶಬ್ದ ಬಳಸಿ ಬಯ್ಯುವುದರ ಜೊತೆಗೆ ಅನಾಗರಿಕ ಬದುಕು ಸಾಗಿಸುತ್ತಿದ್ದರು.
ಇದರಿಂದ ಬೇಸತ್ತ ಬಹಳಷ್ಟು ಜನರು ಸಹಕರಿಸುವಂತೆ ವಿವಿಧ ಜನಪ್ರತಿನಿಧಿಗಳಿಗೆ ಮತ್ತು ಇಲಾಖೆಗೆ ಮೊರೆ ಇಟ್ಟರೂ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರಿನ ಮುಖ್ಯಸ್ಥರಿಂದ ಮಾಹಿತಿ ಪಡೆದ ಸಮಾಜಸೇವಕ ವಿಶು ಶೆಟ್ಟಿ ಅವರು ಕೂಡಲೇ ಸ್ಪಂದಿಸಿದರು. ದೈಗೋಳಿಯ ಆಶ್ರಮದ ಮುಖ್ಯಸ್ಥ ಡಾ.ಉದಯ ಕುಮಾರ್ ದಂಪತಿಯ ಅನುಮತಿ ಪಡೆದು ಖಾಸಗಿ ವಾಹನದ ಮೂಲಕ ಮಂಜೇಶ್ವರಕ್ಕೆ ದಾಖಲಿಸುವ ಮುಖಾಂತರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಮಹಿಳಾ ಪೋಲಿಸ್ ಠಾಣೆಯ ಸಿಬ್ಬಂದಿ ಸಹಕರಿಸಿದರು.
ಮುರುಕು ಮನೆಯಲ್ಲಿ ಅನಾಗರಿಕರ ರೀತಿ ವಾಸ: “ಈ ಕುಟುಂಬ ವಾಸಿಸುವ ಮನೆ ಕಸದ ರಾಶಿ, ಬಟ್ಟೆಗಳ ರಾಶಿಯಿಂದ ತುಂಬಿತ್ತು. ಮನೆಯ ಎಲ್ಲೆಡೆ ಪಾತ್ರೆ-ಪಗಡೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಳೆದ 10 ವರ್ಷಗಳಲ್ಲಿ ಜನಪ್ರತಿನಿಧಿಗಳಾಗಲಿ, ಸಮಾಜದ ಮುಖ್ಯಸ್ಥರಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸದೇ ಇರುವುದು ದುರಂತ. ಈ ಕುಟುಂಬಕ್ಕೆ ನಾಗರಿಕ ಸಮಾಜದ ಕೊಂಡಿ ಕಳಚಿರುವುದೇ ಈ ರೀತಿಯ ಘೋರ ಪರಿಸ್ಥಿತಿಗೆ ಕಾರಣ. ಸರಿಯಾದ ಆರೈಕೆ ಹಾಗೂ ಚಿಕಿತ್ಸೆಯಿಲ್ಲದೆ ಈ ಕುಟುಂಬ ದುರಂತಕ್ಕೀಡಾಗಿದೆ. ಇಂತಹ ಪರಿಸ್ಥಿತಿಯ ಮಹಿಳೆಯನ್ನು ರಕ್ಷಿಸಬೇಕಾದವರು ಕಂಡೂ ಕಾಣದ ಹಾಗೆ ಇರುವುದು ಕರ್ತವ್ಲೋಪಕ್ಕೆ ಸಮ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು. ಸ್ಪಂದಿಸಿದ ಸಖಿ ಒನ್ ಸ್ಟಾಪ್ ಸೆಂಟರಿನ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ” ಎಂದು ಸಮಾಜಸೇವಕ ವಿಶುಶೆಟ್ಟಿ ಅಂಬಲಪಾಡಿ ಹೇಳಿದ್ದಾರೆ.
ಇನ್ನು, ಗೋಕರ್ಣ ಪೊಲೀಸರು ರಾಮತೀರ್ಥ ಗುಡ್ಡದ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ಮೂಲದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ಕೆಲ ತಿಂಗಳ ಹಿಂದೆ ರಕ್ಷಿಸಿದ್ದರು. ಅಪಾಯಕಾರಿ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ನಂತರ ವೀಸಾ ಅವಧಿ ಮುಗಿದಿರುವುದು ಪತ್ತೆಯಾದ ನಂತರ ಅವರನ್ನು ರಷ್ಯಾಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆದಿತ್ತು.
Laxmi News 24×7