ಕಾರವಾರ , ಸೆಪ್ಟೆಂಬರ್17 : ಹಿರಿಯರ ಕಾಲದ ದೇವರ ತೆಂಗಿನಕಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಮಶೆಟ್-ಕೊಳಮಾಲ ಗ್ರಾಮದ ನಿವಾಸಿ ಆಗಿರುವ ದೊಂಡು ವರಕ ಮತ್ತು ಅವನ ತಮ್ಮನ ನಡುವೆ ಹಿರಿಯರ ಕಾಲದ ದೇವರ ತೆಂಗಿನಕಾಯಿ ಸಲುವಾಗಿ ಜಗಳವಾಗಿತ್ತು.
ಅದು ಇತ್ಯರ್ಥವಾದ ನಂತರವೂ ಕೋಪದಿಂದ ಅಣ್ಣನೊಬ್ಬ ತನ್ನ ತಮ್ಮನ ಹೆಂಡತಿ ಭಾಗ್ಯಶ್ರಿಯನ್ನು ಕಬ್ಬಿಣದ ಪಿಕಾಸಿಯಿಂದ ಹೊಡೆದು ಕೊಂದು ಪರಾರಿಯಾಗಿದ್ದು, ಮೂರು ದಿನಗಳ ನಂತರ ಆರೋಪಿ ದೊಂಡು ವರಕ ಪತ್ನಿ ಮನೆಗೆ ಹೋಗಿ ಊಟ ಮಾಡುತ್ತಿದ್ದ ವೇಳೆ ಪೊಲೀಸರು ಬಂದು ಲಾಕ್ ಮಾಡಿದ್ದಾರೆ.
ಏನಿದು ತೆಂಗಿನಕಾಯಿ ಕೊಲೆ ಪ್ರಕರಣ?
ಹಿರಿಯರ ಕಾಲದ ದೇವರ ತೆಂಗಿನಕಾಯಿ ನನಗ್ಯಾಕೆ ಕೊಟ್ಟಿಲ್ಲ ಎಂದು ಅಣ್ಣನೊಬ್ಬ ತಮ್ಮನ ಪತ್ನಿಯನ್ನೆ ಕೊಲೆ ಮಾಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಮಶೆಟ್-ಕೊಳಮಾಲ ಗ್ರಾಮದ ನಿವಾಸಿ ಆಗಿರುವ ದೊಂಡು ವರಕ ಒಬ್ಬ ದೈವ ಭಕ್ತ. ಗೌಳಿ ಕೆಲಸ ಮಾಡುತ್ತಿದ್ದ. ಕೊಲೆ ಮಾಡಿರುವ ಈ ದೊಂಡು ವರಕ ಸೇರಿದಂತೆ ಒಟ್ಟು ಐವರು ಸಹೋದರರು. ಐವರು ಕೂಡ ತಂದೆಯ ಆಸ್ತಿಯನ್ನ ಭಾಗ ಮಾಡಿಕೊಂಡು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ದೊಂಡು ವರಕನ ಮಗನಿಗೆ ಕಳೆದ ಕೆಲವು ತಿಂಗಳಿನಿಂದ ಆರೋಗ್ಯ ಸಮಸ್ಯೆ ಇತ್ತು.
ಹಿರಿಯರ ಕಾಲದಿಂದಲೂ ಪೂಜಿಸುತ್ತಿರುವ ತೆಂಗಿನಕಾಯಿ ಚಿಕ್ಕ ತಮ್ಮನ ಮನೆಯಲ್ಲಿ ಇರುವುದೇ ಇದಕ್ಕೆಲ್ಲಾ ಕಾರಣ ಎಂದು ಭಾವಿಸಿದ ಈತ ತೆಂಗಿನಕಾಯಿಯನ್ನು ತನಗೆ ಕೊಡುವಂತೆ ಕಳೆದ ಒಂದು ವರ್ಷದಿಂದ ಪಟ್ಟು ಹಿಡಿದಿದ್ದ. ಆ ತೆಂಗಿನ ಕಾಯಿ ಬಳಸಿ ತಮ್ಮನ ಹೆಂಡತಿ ಭಾಗ್ಯಶ್ರೀ ನಮ್ಮ ಮೇಲೆ ಮಾಟ ಮಂತ್ರ ಮಾಡಿಸುತ್ತಿದ್ದಾಳೆ ಎಂದು ಊರಿನವರೆಲ್ಲಿರಿಗೂ ಹೇಳುತ್ತಾ ತಿರುಗುತ್ತಿದ್ದ.
ಕಳೆದ ಆರು ತಿಂಗಳ ಹಿಂದೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಹಾಗೂ ದೇವರಿಗೆ ಪ್ರಸಾದ ಮಾಡಿದಾಗ ದೈವವಾಣಿಯೂ ಅವನ ಮೂಢನಂಬಿಕೆಗೆ ಸಾಥ್ ಕೊಟ್ಟಿತ್ತು. ಇದರಿಂದಾಗಿಯೇ ಸಿಟ್ಟಿಗೆದ್ದ ಈತ ಭಾಗ್ಯಶ್ರಿಯ ಹತ್ಯೆ ಮಾಡಿದ್ದಾನೆ.
Laxmi News 24×7