ಬೆಂಗಳೂರು, ಡಿ.25- ಕೊರೊನಾ ಮಾರಿಯು ಸ್ಯಾಂಡಲ್ವುಡ್ ಅನ್ನು ಬೆಂಬಿಡದಂತೆ ಕಾಡುತ್ತಿದ್ದು ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ದೇಶಕ ಭರತ್ (45) ನಿನ್ನೆ ರಾತ್ರಿ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಮೋಹಕ ತಾರೆ ರಮ್ಯಾ ಅಭಿನಯದ ಕಂಠಿ ಚಿತ್ರ ನಿರ್ದೇಶಿಸುವ ಮೂಲಕ ಚಿತ್ರ ಪಯಣ ಆರಂಭಿಸಿದ ರಾಮನಗರ ಚಿಕ್ಕಮುಳುವಾಡಿ ಗ್ರಾಮದ ಭರತ್ ಹೊಸ ಸಿನಿಮಾದ ತಯಾರಿಯಲ್ಲಿರುವಾಗಲೇ ತಮ್ಮ ಬಣ್ಣದ ಲೋಕದ ಪಯಣ ಮುಗಿಸಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಿರ್ದೇಶನದ ಗರಡಿಯಲ್ಲಿ ಪಳಗಿದ ಭರತ್ ಅವರು ರವಿಚಂದ್ರನ್ ಹಾಗೂ ಇಷಾಕೊಪ್ಪೀಕರ್ ಅಭಿನಯದ ಓ ನನ್ನ ನಲ್ಲೆ ಚಿತ್ರದ ಸಹ ನಿರ್ದೇಶಕರಾಗಿದ್ದರು. ಕಂಠಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಭರತ್ ನಂತರ ರಾಜವರ್ಧನ್ ಅಭಿನಯದ ಮರೆಯುವ ಮುನ್ನ, ಕ್ರೇಜಿಸ್ಟಾರ್ ರವಿಚಂದ್ರನ್ ರ ಪುತ್ರ ವಿಕ್ರಮ್ ನಟನೆಯ ಸಾಹೇಬ ಚಿತ್ರಗಳನ್ನು ನಿರ್ದೇಶಿಸಿದ್ದು, ಪ್ರಜ್ವಲ್ ದೇವರಾಜ್ಗಾಗಿ ಚಿತ್ರವೊಂದನ್ನು ನಿರ್ದೇಶಿಸುವ ಸಿದ್ಧತೆಯಲ್ಲಿರುವಾಗಲೇ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು.
ವಿಜಯನಗರದ ಅತ್ತಿಗುಪ್ಪೆಯಲ್ಲಿ ನೆಲೆಸಿದ್ದ ಭರತ್ ಕೆಲವು ದಿನಗಳಿಂದ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲೇ ಕೊರೊನಾ ಕಾಣಿಸಿಕೊಂಡಿದ್ದು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಭರತ್ ಅವರು ಪತ್ನಿ, ಪುತ್ರಿ, ಸಹೋದರಿ ಹಾಗೂ ತಾಯಿಯನ್ನು ಅಗಲಿದ್ದು ಅವರ ಅಂತ್ಯಸಂಸ್ಕಾರವನ್ನು ಕೆಂಗೇರಿಯ ಬಿಜೆಎಸ್ ಆಸ್ಪತ್ರೆಯ ಬಳಿ ಇರುವ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಭರತ್ ಅವರ ನಿಧನಕ್ಕೆ ನಟರಾದ ರವಿಚಂದ್ರನ್, ಶ್ರೀಮುರಳಿ, ವಿಕ್ರಮ್ ಸೇರಿದಂತೆ ಹಲವಾರು ಸಂತಾಪ ಸೂಚಿಸಿದ್ದಾರೆ.