ಬೆಳಗಾವಿ: “ಭೂಮಿ ಇರುವವರೆಗೆ ಬಸವಣ್ಣನವರ ವಿಚಾರಗಳನ್ನು ಕಾಪಾಡುವ ಪ್ರಯತ್ನ ಮಾಡಬೇಕಿದೆ. ದೇಶದಲ್ಲಿ ಮೂಲ ವಿಚಾರ ಮತ್ತು ಇತಿಹಾಸವನ್ನು ತಿರುಚುವ ಕೆಲಸ ಸಾವಿರಾರು ವರ್ಷಗಳಿಂದ ನಡೆಯುತ್ತಿದೆ. ಅಂತಹ ಸಂದರ್ಭದಲ್ಲಿ ಅದನ್ನು ಉಳಿಸುವ ಕೆಲಸ ಬಸವ ಸಂಸ್ಕೃತಿ ಅಭಿಯಾನದ ಮೂಲಕ ನಡೆಯುತ್ತಿರುವುದು ಶ್ಲಾಘನೀಯ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಎಸ್.ಜಿ.ಬಿ.ಐ.ಟಿ. ಕಾಲೇಜಿನ ಆವರಣದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಆ ದಿನಗಳಲ್ಲಿ ವಚನ ಸಾಹಿತ್ಯ ಮತ್ತು ಬಸವಣ್ಣನವರ ಇತಿಹಾಸವನ್ನು ನಾಶಪಡಿಸಲು ನಾಶಪಡಿಸಲು ದೊಡ್ಡ ಪ್ರಯತ್ನ ಆಗಿತ್ತು. ಆ ಸಂದರ್ಭದಲ್ಲಿ ಶರಣ – ಶರಣೆಯರು ತಮ್ಮ ತಲೆ ಮೇಲೆ ಹೊತ್ತುಕೊಂಡು ಹೋಗಿ ವಚನ ಸಾಹಿತ್ಯ ಉಳಿಸಿದ್ದರು.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಸವ ಸಂಸ್ಕೃತಿ ಅಭಿಯಾನದ ಮೂಲಕ ಅವರ ವಿಚಾರಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗುತ್ತಿದೆ. ಬಸವಣ್ಣನವರ ವಿಚಾರ, ಹೋರಾಟ ಮುಂದಿನ ಪೀಳಿಗೆ ಮತ್ತು ಈ ದೇಶ ಮರೆತು ಹೋಗಬಾರದು ಎಂಬುದು ಈ ಅಭಿಯಾನದ ಉದ್ದೇಶವಾಗಿದೆ” ಎಂದರು.
“ಬಸವಣ್ಣನವರು ಸಾಹಿತ್ಯ ರೂಪದಲ್ಲಿ ಹೇಳಿದ್ದನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ್ದಾರೆ. ವಚನಗಳಲ್ಲಿ ಇರುವುದು ಸಂವಿಧಾನದಲ್ಲಿದೆ. ಸಂವಿಧಾನಕ್ಕೂ ವಚನ ಸಾಹಿತ್ಯಕ್ಕೂ ಯಾವುದೇ ಬೇಧ ಭಾವ ಮತ್ತು ಅಂತರ ಇಲ್ಲ. ಅಷ್ಟೇ ಶ್ರೇಷ್ಠವಾಗಿವೆ. ಬಸವಣ್ಣನವರನ್ನು ನಮ್ಮ ಸಿದ್ದರಾಮಯ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದರು. ಜೊತೆಗೆ ಬಸವಣ್ಣನವರ ಫೋಟೊ ಎಲ್ಲಾ ಕಚೇರಿಗಳಲ್ಲಿ ಹಾಕುವ ಘೋಷಣೆಯನ್ನು ಹಿಂದಿನ ನಮ್ಮ ಸಿದ್ದರಾಮಯ್ಯ ಸರ್ಕಾರವೇ ಮಾಡಿತ್ತು ಎಂಬುದನ್ನು ತುಂಬಾ ಹೆಮ್ಮೆಯಿಂದ ಹೇಳುತ್ತೇನೆ” ಎಂದು ಸತೀಶ ಜಾರಕಿಹೊಳಿ ಹೇಳಿದರು.
Laxmi News 24×7