ಶಿವಮೊಗ್ಗ: ಇದೇ ತಿಂಗಳ 25 ರಂದು ಹಸೆಮಣೆ ಏರಬೇಕಿದ್ದ ಯುವತಿಯ ಮೇಲೆ ಬಸ್ ಹರಿದ ಪರಿಣಾಮ ಆಕೆ ಮೃತಪಟ್ಟ ದಾರುಣ ಘಟನೆ ನಗರದ ಹೊರವಲಯದ ಮಲವಗೂಪ್ಪದಲ್ಲಿ ಸೋಮವಾರ ನಡೆದಿದೆ. ಕವಿತಾ (22) ಮೃತ ಯುವತಿ.
ಶಿವಮೊಗ್ಗ ತಾಲೂಕು ದುಮ್ಮಳ್ಳಿಯ ಶಿವಪುರ ತಾಂಡಾದ ನಿವಾಸಿಯಾಗಿರುವ ಕವಿತಾ ಎಂಎಸ್ಸಿ ಪದವೀಧರೆಯಾಗಿದ್ದು, ನಗರದ ಸರ್ಜಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಕವಿತಾ ಅವರು ಇಂದು ತಮ್ಮ ಸಹೋದರನ ಜೊತೆ ಬೈಕ್ನಲ್ಲಿ ಮನೆಯಿಂದ ಆಸ್ಪತ್ರೆಗೆ ಹೊರಟಿದ್ದರು.
ಬಸ್ ರೂಪದಲ್ಲಿ ಬಂದ ಜವರಾಯ: ಸೆಪ್ಟಂಬರ್ 25 ರಂದು ಕವಿತಾ ಅವರ ವಿವಾಹ ನಿಶ್ಚಯವಾಗಿತ್ತು. ಇನ್ನು 17 ದಿನಗಳಲ್ಲಿ ಮದುವೆ ಸಂಭ್ರಮದಲ್ಲಿ ತೇಲಬೇಕಿದ್ದ ಯುವತಿ ಜವರಾಯನ ರೂಪದಲ್ಲಿ ಬಂದ ಬಸ್ಗೆ ಬಲಿಯಾಗಿದ್ದಾರೆ.
ನಾಳೆಯಿಂದ ಕೆಲಸಕ್ಕೆ ರಜೆ ಹಾಕಿ ಮದುವೆ ತಯಾರಿಯಲ್ಲಿ ತೊಡಗಿಸಿಕೊಳ್ಳಲು ಕವಿತಾ ಅವರು ಯೋಜಿಸಿದ್ದರು. ಆದರೆ, ವಿಧಿಯ ಆಟಕ್ಕೆ ಆಕೆ ಬಲಿಯಾಗಿರುವುದು ನಿಜಕ್ಕೂ ಮನಕಲಕುವಂತಾಗಿದೆ.
ಬಿದ್ದ ಕವಿತಾ ಮೇಲೆ ಹರಿದ ಬಸ್: ಕೆಲಸಕ್ಕೆಂದು ಸಹೋದರನ ಜೊತೆ ಬೈಕ್ನಲ್ಲಿ ಬರುವಾಗ ಮಲವಗೂಪ್ಪದಲ್ಲಿ ಎದುರಿನಿಂದ ಮತ್ತೊಂದು ಬೈಕ್ ಬಂದಿದೆ. ಈ ವೇಳೆ ಅದರ ಹ್ಯಾಂಡಲ್ ಕವಿತಾ ಅವರಿಗೆ ತಾಗಿದೆ. ಹಿಂದೆ ಕುಳಿತಿದ್ದ ಅವರು ಬಲಗಡೆಯಿಂದ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದೆಯೇ ಬರುತ್ತಿದ್ದ ಸಿಟಿ ಬಸ್ ಯುವತಿ ಮೇಲೆ ಹರಿದು ಹೋಗಿದೆ. ಇದರಿಂದ ಕವಿತಾ ಅವರು ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಸಹೋದರಿಯ ಮೃತದೇಹ ಕಂಡು ಸಹೋದರ ರಸ್ತೆಯಲ್ಲೇ ಗೋಳಾಡಿದ್ದಾರೆ.
ಅವೈಜ್ಞಾನಿಕ ರಸ್ತೆ ಕಾಮಗಾರಿ: ಈ ಭಾಗದಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ಸ್ಥಳೀಯ ಹನುಮನಾಯಕ್ ಎಂಬವರು ಮಾತನಾಡಿ, ಶಿವಮೊಗ್ಗ ಮತ್ತು ಭದ್ರಾವತಿ ನಡುವಿನ ರಸ್ತೆ ಕಾಮಗಾರಿಯು ಅವೈಜ್ಞಾನಿಕವಾಗಿ ಕೂಡಿದೆ. ಹಳೆ ಶುಗರ್ ಫ್ಯಾಕ್ಟರಿ ಬಳಿ ನಡೆಯುತ್ತಿರುವ ಕಾಮಗಾರಿ ಹಾಗೂ ಡಿವೈಡರ್ ಅಪಾಯದ್ದಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.
ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅಪಘಾತ ನಡೆಯದಂತೆ ಕ್ರಮ ಜರುಗಿಸಬೇಕಿದೆ. ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕವಿತಾ ಅವರು ಇಂದು ಬಸ್ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಆಕೆ ಕುಟುಂಬದ ನಿರ್ವಹಣೆಯ ಹೊಣೆ ಹೊತ್ತಿದ್ದರು. ಬಸ್ ಹರಿದು ಸಾವಿಗೀಡಾಗಿದ್ದು, ಈಗ ಕುಟುಂಬ ಅನಾಥವಾಗಿದೆ. ಇದಕ್ಕೆಲ್ಲಾ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣ ಎಂದು ದೂರಿದರು.
Laxmi News 24×7