ರಾಯಚೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ತರಕಾರಿ ಮಾರುಕಟ್ಟೆಗೆ ಇಂದು ಬೆಳಗ್ಗೆ ದಿಢೀರ್ ಆಗಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಭೇಟಿ ನೀಡಿ, ಎಪಿಎಂಸಿ ಅಧಿಕಾರಿಗಳ ವಿರುದ್ಧ ಎರಡು ಸುಮೊಟೊ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದಿನಿಂದ ಮೂರು ದಿನಗಳ ಕಾಲ ಉಪ ಲೋಕಾಯುಕ್ತರ ಪ್ರವಾಸವಿದೆ. ಮೊದಲ ದಿನವಾದ ಇಂದು ಬೆಳಗ್ಗೆ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ ಅವರು, ವ್ಯಾಪಾರಸ್ಥರು, ರೈತರು, ಕೂಲಿ ಕಾರ್ಮಿಕರನ್ನು ಭೇಟಿ ಮಾಡಿ ಸಮಾಲೋಚಿಸಿದರು. ಎಪಿಎಂಸಿ ಅಧಿಕಾರಿಗಳು ವಿವಿಧ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿರುವುದರಿಂದಾಗಿ, ಅವರ ವಿರುದ್ಧ ಸುಮೋಟೊ ಕೇಸ್ ದಾಖಲಿಸುವಂತೆ ಸೂಚನೆ ನೀಡಿದರು.
ಇದಾದ ಬಳಿಕ ಕೈಗಾರಿಕಾ ಪ್ರದೇಶಕ್ಕೆ ತೆರಳಿ, ಟೈಮಾಕ್ಸ್ ಮತ್ತು ಹತ್ತಿರದ ಕಾರ್ಖಾನೆಗಳ ಬಳಿಯಲ್ಲಿ ಹರಿಯುತ್ತಿದ್ದ ರಾಸಾಯನಿಕಮಿಶ್ರಿತ ಕಲುಷಿತ ನೀರು ನದಿಗೆ ಹರಿಯುವುದನ್ನು ವೀಕ್ಷಿಸಿದರು. ನದಿಗೆ ಈ ರೀತಿಯಾಗಿ ನೀರು ಹರಿದುಬಿಟ್ಟರೂ ಕ್ರಮ ಕೈಗೊಳ್ಳದ ಪರಿಸರ ಇಲಾಖೆಯ ವಿರುದ್ಧ ಗರಂ ಆದರು. ನಂತರ ಪರಿಸರ ಅಧಿಕಾರಿ ಇಲಾಖೆಯ ವಿರುದ್ಧ ಸುಮೊಟೊ ಕೇಸ್ ದಾಖಲಿಸುವಂತೆ ತಿಳಿಸಿದರು. ಇದರ ಜೊತೆಗೆ ಯದ್ಲಾಪುರ ಗ್ರಾಮ ಪಂಚಾಯತ್ ಪಿಡಿಒ ಮತ್ತು ರಾಯಚೂರು ತಾಲೂಕು ಪಂಚಾಯತ್ ಇಒ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದರು.
ಇದಾದ ನಂತರ ಮಂಚಿಕೊಂಡ ಆಗ್ರೋ ಫುಡ್ ಕಾರ್ಖಾನೆಯಿಂದ ಹೊರಬರುತ್ತಿರುವ ಕಲುಷಿತ ನೀರನ್ನು ವೀಕ್ಷಿಸಿದರು. ಕಾರ್ಖಾನೆಯಿಂದ ಹೊರಬರುವ ನೀರನ್ನು ಪರಿಶೀಲಿಸಿ ಸಂಜೆಯೊಳಗೆ ವರದಿ ಸಲ್ಲಿಸಬೇಕು ಎಂದರು. ಅಲ್ಲದೇ, ಕಾರ್ಖಾನೆಗಳ ಕಲುಷಿತ ನೀರಿನಿಂದ ಭತ್ತದ ಬೆಳೆಗೆ ಹಾನಿಯಾಗಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಪರಿಸರ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಾರ್ಖಾನೆಯ ಕಲುಷಿತ ನೀರಿನಿಂದ ಸುತ್ತಲಿನ ಹಳ್ಳಿಗಳ ಜನರಿಗೆ ಚರ್ಮ ರೋಗ ಬರುತ್ತಿದೆ ಎಂದು ಗ್ರಾಮಸ್ಥರು ದೂರಿದ್ದು, ಸುತ್ತಲಿನ ಹಳ್ಳಿಗಳಲ್ಲಿ ಸಂಚರಿಸಿ ಚರ್ಮರೋಗದ ಬಗ್ಗೆ ಪರಿಶೀಲಿಸಿ ಸಂಜೆಯೊಳಗೆ ವರದಿ ನೀಡುವಂತೆ ಚಿಕ್ಕಸೂಗೂರು ಪಿಡಿಒ ಸರೋಜಮ್ಮ ಅವರಿಗೆ ಆದೇಶಿಸಿದರು.
‘ನಿರ್ಲಕ್ಷ್ಯ ತೋರುವ ಎಪಿಎಂಸಿ ಅಧಿಕಾರಿಗಳನ್ನು ಅಮಾನತು ಮಾಡಿ’: ಎಪಿಎಂಸಿ ಅಧಿಕಾರಿಗಳ ಸಭೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಹಾಗೂ ವಿಳಂಬ ನೀತಿ ಅನುಸರಿಸುವ ಎಪಿಎಂಸಿ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಆಗಸ್ಟ್ 24, 2025ರಂದು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
Laxmi News 24×7