ಉತ್ತರ ಕನ್ನಡ (ಯಲ್ಲಾಪುರ) : ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಬೇಡ್ತಿ ನದಿಗೆ ಮೀನು ಹಿಡಿಯಲು ಹೋಗಿ ಹಿಂದಿರುಗುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದ ಸಹೋದರರಿಬ್ಬರಲ್ಲಿ ಓರ್ವನ ಶವ ಸೋಮವಾರ ಪತ್ತೆಯಾಗಿದೆ.
ತಾಲೂಕಿನ ಶಿರನಾಲ ಮಾದನಸರದ ಮಹ್ಮದ್ ರಫೀಕ್ ಸಾಬ್ ಸೈಯದ್ (27) ಅವರ ಶವ ಪತ್ತೆಯಾಗಿದೆ. ನಾಪತ್ತೆಯಾದ ಮಹ್ಮದ್ ಹನೀಫ್ ಸಾಬ್ ಸೈಯದ್ (25) ಅವರಿಗೆ ಹುಡುಕಾಟ ಮುಂದುವರಿದಿದೆ. ಭಾನುವಾರ ಬೆಳಗ್ಗೆ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು ಈ ಇಬ್ಬರು ತೆರಳಿದ್ದರು. ಸಂಜೆ ಮೀನು ಹಿಡಿದು ವಾಪಸು ಬರುತ್ತಿರುವಾಗ ಕವಲಗಿ ಹಳ್ಳದಲ್ಲಿ ಒಮ್ಮೆಲೆ ನೀರು ಹೆಚ್ಚಾದರಿಂದ ಹಳ್ಳದ ಮಧ್ಯದಲ್ಲಿದ್ದ ಇಬ್ಬರೂ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಘಟನೆ ನಡೆದ ವೇಳೆಯಿಂದ ಪೊಲೀಸ್ ಮತ್ತು ಅಗ್ನಿಶಾಮಕ ದಳದವರು ಸೇರಿ ಹಳ್ಳದಲ್ಲಿ ಹುಡುಕಾಟ ಆರಂಭಿಸಿದ್ದರು. ಸೋಮವಾರ ಘಟನೆ ನಡೆದ ಸ್ಥಳದಿಂದ 300 ಮೀ. ದೂರದಲ್ಲಿ ಅಣ್ಣ ಮಹಮ್ಮದ ರಫೀಖ್ ಶವ ಪತ್ತೆಯಾಗಿದ್ದು, ಅವನ ತಮ್ಮ ಮಹಮ್ಮದ್ ಹನೀಫ್ ಇನ್ನೂ ಸಹ ಪತ್ತೆಯಾಗಿಲ್ಲ.
ಸ್ಥಳಕ್ಕೆ ಶಿರಸಿ ಉಪವಿಭಾಗದ ಡಿ.ಎಸ್.ಪಿ. ಗೀತಾ ಪಾಟೀಲ, ಸಿಪಿಐ ರಮೇಶ ಹಾನಾಪುರ, ಪಿ.ಎಸ್.ಐ. ಯಲ್ಲಾರಲಿಂಗ ಕುನ್ನೂರು, ಸಿದ್ದಪ್ಪ ಗುಡಿ, ಹಾಗೂ ಸಿಬ್ಬಂದಿಗಳು ಅಗ್ನಿಶಾಮಕ ಸಿಬ್ಬಂದಿಗಳು ಉಪಸ್ಥಿತರಿದ್ದು, ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Laxmi News 24×7