ಬೆಂಗಳೂರು: ಬೆಂಗಳೂರು – ಬೆಳಗಾವಿ ಮಾರ್ಗದ ವಂದೇ ಭಾರತ್ ರೈಲಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದ ಹೃದಯ ಪ್ರದೇಶವಾಗಿರುವ ನಗರ ರೈಲು ಹಾಗೂ ಮೆಜೆಸ್ಟಿಕ್ ಬಸ್ ನಿಲ್ದಾಣಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ವಾಹನ ಸಂಚಾರ ನಿರ್ಬಂಧಿಸಿದ್ದಾರೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೆಂಗಳೂರು – ಬೆಳಗಾವಿ ನಡುವಿನ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವರು ಹಾಗೂ ರಾಜ್ಯ ಸರ್ಕಾರ ಪ್ರತಿನಿಧಿಗಳು ಬರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಸಾರ್ವಜನಿಕರ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲ ರಸ್ತೆಗಳನ್ನ ನಿರ್ಬಂಧಿಸಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಎಲ್ಲೆಲ್ಲಿ ಸಂಚಾರ ನಿರ್ಬಂಧ: ಕೆಎಸ್ ಆರ್ ರೈಲ್ವೇ ಪ್ಲಾಟ್ ಫಾರಂ ನಂಬರ್ 7 ಹಾಗೂ 8 ರಿಂದ ಖೋಡೆ ಅಂಡರ್ ಪಾಸ್ ಹಾಗೂ ಖೋಡೆ ಸರ್ಕಲ್ ನಿಂದ ಮಹಾರಾಣಿ ಬ್ರಿಡ್ಜ್ ವರೆಗೆ ಎಲ್ಲಾ ಮಾದರಿ ವಾಹನಗಳನ್ನ ನಿರ್ಬಂಧಿಸಲಾಗಿದೆ. ಶಾಂತಲಾ ಜಂಕ್ಷನ್ ಕಡೆಯಿಂದ ಖೋಡೆ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು, ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಎಕ್ಸಿಟ್ ಕಡೆಯಿಂದ ಖೋಡೆ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ವಾಹನಗಳು, ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ಸರ್ಕಲ್ ಕಡೆಗೆ ಹೋಗುವ ಎಲ್ಲಾ ವಾಹನಗಳು, ಕಾಳಿದಾಸ ರಸ್ತೆ, ಕನಕದಾಸ ಜಂಕ್ಷನ್ ಕಡೆಯಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳನ್ನ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಈ ಮಾರ್ಗಗಳ ಮೂಲಕ ಗಮ್ಯ ಸ್ಥಳ ತಲುಪಿ: ಎಲ್ ಟಿಪಿ ರಸ್ತೆ, ಕಾಟನ್ ಪೇಟೆ ಮುಖ್ಯರಸ್ತೆ, ಮೈಸೂರು ರಸ್ತೆ, ಮಾಗಡಿ ಮುಖ್ಯರಸ್ತೆ, ಶಾಂತಲಾ ಜಂಕ್ಷನ್ ನಿಂದ ಬರುವವರು ಎಲ್ ಟಿಪಿ ರಸ್ತೆ ಮತ್ತು ಕಾಟನ್ ಪೇಟೆ ಮುಖ್ಯರಸ್ತೆ ಮೂಲಕ ಸಂಚರಿಸಬಹುದಾಗಿದೆ.
ಮೈಸೂರು ಬ್ಯಾಂಕ್ ಕಡೆಯಿಂದ ಬರುವವರು ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್ ಜಂಕ್ಷನ್, ಕೆ.ಜಿ.ಜಂಕ್ಷನ್, ಎಲೈಟ್, ಟಿಬಿ ರಸ್ತೆ ರಾಜೀವ್ ಗಾಂಧಿ ಸರ್ಕಲ್ ಮೂಲಕ ತೆರಳಬಹುದಾಗಿದೆ.
ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಎಕ್ಸಿಟ್ ಕಡೆಯಿಂದ ಬರುವವರು ಎಲ್ ಟಿಪಿ ರಸ್ತೆ,ಮತ್ತು ಕಾಟನ್ ಪೇಟೆ ಮುಖ್ಯರಸ್ತೆ ಮೂಲಕ ಹೋಗಬಹುದಾಗಿದೆ. ಕಾಳಿದಾಸ ರಸ್ತೆ ಮಾರ್ಗ ಬರುವವರು ಕನಕದಾಸ ಜಂಕ್ಷನ್ ಬಲ ತಿರುವು ಪಡೆದ ಸಾಗರ ಜಂಕ್ಷನ್ ಕಡೆಗೆ ತೆರಳುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
Laxmi News 24×7