ಮೈಸೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದರೆ, ಇತ್ತ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೇ ಮತ ಖರೀದಿ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋಲುತ್ತಾರೆ ಎಂದು ತಿಳಿದು ನಾನೇ ಅವರನ್ನು ಬಾದಾಮಿಗೆ ಕರೆದುಕೊಂಡು ಬಂದು ಅಲ್ಲಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರನ್ನು ಒಪ್ಪಿಸಿ ಚುನಾವಣೆಗೆ ನಿಲ್ಲಿಸಿದೆವು. ಅಲ್ಲಿ ಚಿಮ್ಮನಕಟ್ಟಿ ಅವರ ಸಹಾಯದಿಂದ ಸಾಲದ ಹಣದಲ್ಲಿ ಮತ ಖರೀದಿ ಮಾಡಿ, ಎರಡು ಸಾವಿರ ಮತಗಳಿಂದ ಗೆಲ್ಲಿಸಿದೆವು ಎಂದು ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಇಬ್ರಾಹಿಂ ಅವರು, ದಲಿತ ಸಿಎಂ ಮಾಡಿದರೆ ಮಾಡಲಿ. ಅದು ಒಳ್ಳೆಯದೇ. ಸಿದ್ದರಾಮಯ್ಯ ಸಿಎಂ ಆಗಿದ್ದು ಯಾರಿಂದ?. ನಾನೇ ಅವರನ್ನು ಬಾದಾಮಿಗೆ ಕರೆದುಕೊಂಡು ಹೋಗಿ ನಿಲ್ಲಿಸಿದ್ದೆ. ಅವರು ಚಾಮುಂಡಿ ಕ್ಷೇತ್ರದಲ್ಲಿ ನಿಂತರೆ ಸೋಲುತ್ತಾರೆ ಎಂದು ಗೊತ್ತಾದ ಬಳಿಕ ಚಿಮ್ಮನಕಟ್ಟಿ ಅವರನ್ನು ಒಪ್ಪಿಸಿ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿಲ್ಲಿಸಿ ಗೆಲ್ಲಿಸಿದೆವು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ದೇವರಾಜ ಅರಸು ನನ್ನ ರಾಜಕೀಯ ಗುರುಗಳು. ವೈಯಕ್ತಿಕವಾಗಿ ನನಗೆ ದಲಿತ ಅಥವಾ ಮುಸ್ಲಿಮ್ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ. ನಾನು ರಾಜ್ಯಾದ್ಯಂತ ಸಂಪೂರ್ಣವಾಗಿ ಓಡಾಡಿದ್ದೇನೆ. ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ನನಗೆ ಗೊತ್ತಿದೆ. ಮೀಸಲಾತಿಯನ್ನು ಜಾತಿ ನೋಡಿ ಕೊಡಬಾರದು. ಆರ್ಥಿಕ ಬಲ ನೋಡಿ ಕೊಡಬೇಕು. ದಲಿತ ಹಾಗೂ ಬ್ರಾಹ್ಮಣ ಕಾಲಂ ಅನ್ನು ಪ್ರತ್ಯೇಕವಾಗಿ ಮಾಡಬಾರದು ಎಂದರು.
Laxmi News 24×7