ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 8 ಕೋಟಿ ಗೋಲ್ಮಾಲ್ ಹಗರಣ!!!
13 ಜನರ ವಿರುದ್ಧ ಎಫ್.ಐ.ಆರ್. ದಾಖಲು
ಬಾಗಲಕೋಟೆ ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 8 ಕೋಟಿ ಗೋಲ್ಮಾಲ್ ಹಗರಣ ಪ್ರಕರಣದಲ್ಲಿ 13 ಜನರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ.
ಬಾಗಲಕೋಟೆ ಕಾರ್ಮಿಕ ಇಲಾಖೆಯಲ್ಲಿ ಬರೋಬ್ಬರಿ 8 ಕೋಟಿ ಗೋಲ್ಮಾಲ್ ಹಗರಣ ಪ್ರಕರಣ ಬೆಳಕಿಗೆ ಬಂದಿದೆ. ಫಲಾನುಭವಿಗಳ ಖಾತೆಯ ಕೋಟಿ ಕೋಟಿ ಸಹಾಯಧನವೇ ಕೊಳ್ಳೆ ಹೊಡೆಯಲಾಗಿದೆ. ಮೊದ ಮೊದಲು 2 ಕೋಟಿ ಹಗರಣ ಮಾತ್ರ ಬೆಳಕಿಗೆ ಬಂದಿತ್ತು, ತನಿಖೆ ನಡೆದಾಗ ಬರೋಬ್ಬರಿ 8 ಕೋಟಿಗೆ ಬಂದು ನಿಂತಿದೆ. ಕಾರ್ಮಿಕ ಇಲಾಖೆಯ 1142 ಫಲಾನುಭವಿಗಳಿಗೆ ಹೋಗಬೇಕಿದ್ದ 8 ಕೋಟಿ 30 ಲಕ್ಷ ಸಿಬ್ಬಂದಿಯ ಸಂಭಂದಿಕರು ಹಾಗೂ ಆಪ್ತರ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಹೊರಗುತ್ತಿಗೆಯ ಮೂಲಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವರಿಂದಲೇ ಈ ಅಕ್ರಮ ಮಾಡಿರುವ ಆರೋಪ ಕೇಳಿ ಬಂದಿದ್ದು, 13 ಜನರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಅಲ್ಲದೇ, ಹಲವರನ್ನು ಅರೆಸ್ಟ್ ಮಾಡಲಾಗಿದ್ದು, ಒಟ್ಟು 33 ಜನರನ್ನು ತನಿಖೆಗೊಳಪಡಿಸಲಾಗಿದೆ. ಈಗ ಆರೋಪಿಗಳ ಆಸ್ತಿ ಜಪ್ತಿಗೆ ಸಿದ್ಧತೆಯನ್ನು ನಡೆಸಲಾಗಿದೆ. ಆದರೇ, ದಾಖಲೆ ಒದಗಿಸೋಕೆ ಮೀನಮೇಷ ಎನಿಸುತ್ತಿದ್ದಾರೆಂಬ ಆರೋಪವೂ ಕೂಡ ಕೇಳಿ ಬಂದಿದೆ. ಸಚಿವರ ಸೂಚನೆ ಮೇರೆಗೆ ಸುಮೋಟೋ ಕೇಸ್ ದಾಖಲಿಸಲಾಗಿದ್ದು, ಕಾರ್ಮಿಕ ಮಂಡಳಿ ದಾಖಲೆ ಪರಿಶೀಲಿಸಿ ಪ್ರಾಥಮಿಕ ತನಿಖೆ ನಡೆಸಿದಾಗ ಗೋಲ್ಮಾಲ್ ಬಯಲಾಗಿದೆ. ಕಾರ್ಮಿಕ ಇಲಾಖೆ ಅಧಿಕಾರಿಯಿಂದ ಸಿಇಎನ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಆರೋಪಿಗಳ ವಿವಿಧ ಖಾತೆಗಳಲ್ಲಿದ್ದ 1.50 ಕೋಟಿಗೂ ಅಧಿಕ ಆಸ್ತಿ ಫ್ರೀಜ್ ಮಾಡಿ ಇರಿಸಲಾಗಿದೆ. 2023 ಜೂನ್ 5 ರಿಂದ 2024 ಫೆಬ್ರವರಿ 27 ರ ಅವಧಿಯಲ್ಲಿ ನಡೆದಿದ್ದ ಹಗರಣ ಇದಾಗಿದ್ದು, ಮಕ್ಕಳ ಮದುವೆ, ವೈದ್ಯಕೀಯ ವೆಚ್ಚ, ಶೈಕ್ಷಣಿಕ ವೆಚ್ಚ ನೀಡಲು ಅರ್ಜಿ ಸಲ್ಲಿಸಿದ್ದ ಕಾರ್ಮಿಕರ ಹಣ ಗುಳುಂ ಮಾಡಲಾಗಿದೆ.
ಆರಂಭದಲ್ಲಿ ಇಲಾಖೆ ಅಧಿಕಾರಿ ನೀಡಿದ ದೂರಿನಲ್ಲಿ 37.12 ಲಕ್ಷ ರೂ. ಹಗರಣ ಬೆಳಕಿಗೆ ಬಂದಿದ್ದು, ಬಳಿಕ 404 ಕಾರ್ಮಿಕರಿಗೆ ಸೇರಬೇಕಿದ್ದ 2.83 ಕೋಟಿ ರೂ. ದೋಚಿರುವುದು ಪತ್ತೆಯಾಗಿದೆ. ಅಂತಿಮವಾಗಿ 1142 ಕಾರ್ಮಿಕ ಫಲಾನುಭವಿಗಳಿಗೆ ಸೇರಬೇಕಿದ್ದ, ಅಂದಾಜು 8.30 ಕೋಟಿ ರೂ. ವಂಚಿಸಲಾಗಿದೆ ಎಂದು ತಿಳಿದು ಬಂದಿದೆ. ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾಗಿದ್ದ ನಾಗೇಶ್ ಡಿ.ಜಿ.ಕೊಟ್ಟ ದೂರಿನ ಮೇಲೆ ಆರೋಪಿ ದ್ಯಾವಪ್ಪ ಸೇರಿ ಅಕೌಂಟ್ಗಳಿಗೆ ಹಣ ಹಾಕಿಸಿಕೊಂಡವರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ ಎಂದು ಬಾಗಲಕೋಟೆ ಎಸ್ಪಿ ಸಿದ್ಧಾರ್ಥ್ ಗೋಯಲ್ ಮಾಹಿತಿ ನೀಡಿದ್ದಾರೆ.
Laxmi News 24×7