ಜಿಟಿ ಜಿಟಿ ಮಳೆಗೆ ಕೆಸರುಗದ್ದೆಯಂತಾದ ತಳಕವಾಡ-ಆಶ್ರಯ ಪ್ಲಾಟ್ ರಸ್ತೆ
ಕ್ಯಾರೆ ಎನ್ನದ ಪಂಚಾಯಿತಿ ವಿರುದ್ಧ ಹಿಡಿಶಾಪ!!!
ಜಿಟಿ ಜಿಟಿ ಮಳೆಗೆ ಕೆಸರುಗದ್ದೆಯಂತಾದ ರಸ್ತೆಯಲ್ಲಿ ಪ್ರತಿದಿನ ಮಹಿಳೆಯರು ಮಕ್ಕಳು ಬಿದ್ದು ಗಾಯಗೊಳ್ಳುತ್ತಿದ್ದು, ಕ್ಯಾರೆ ಎನ್ನದ ಗ್ರಾಮ ಪಂಚಾಯಿತಿಯ ವಿರುದ್ಧ ಮಹಿಳೆಯರು ಹಿಡಿಶಾಪ ಹಾಕುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಆಲೂರು ಎಸ್.ಕೆ ಗ್ರಾಮದಲ್ಲಿ ಕಂಡು ಬರುತ್ತಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಆಲೂರು ಎಸ್.ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಳಕವಾಡ ಗ್ರಾಮದಿಂದ ಆಶ್ರಯ ಪ್ಲಾಟ್ಗೆ ಸಾಗುವ ಅರ್ಧ ಕಿಮೀ ರಸ್ತೆ ಮಳೆಯ ಕಾರಣದಿಂದ ಸಂಪೂರ್ಣ ಕೆಸರುಮಯವಾಗಿದೆ. ತಳಕವಾಡ ಗ್ರಾಮ ಮತ್ತು ಆಶ್ರಯ ಪ್ಲಾಟ್ ನಡುವೆ ಸಂಪರ್ಕ ಕಲ್ಪಿಸುವ ಈ ಮುಖ್ಯರಸ್ತೆಯಲ್ಲಿ ದಿನವೂ ವೃದ್ದರು, ಮಕ್ಕಳು, ರೈತರು ಹಾಗೂ ಬೈಕ್ ಸವಾರರು ಎದ್ದು ಬಿದ್ದು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಮಳೆಯಾದರೂ ಬೈಕುಗಳು ಸ್ಲಿಪ್ ಆಗಿ ಕೆಸರಲ್ಲಿ ಬೀಳುವಂತಾಗಿದೆ.
2009ರ ಮಲಪ್ರಭಾ ನದಿಯ ಪ್ರವಾಹದ ಬಳಿಕ ನಿರ್ಮಿತ ಆಶ್ರಯ ಪ್ಲಾಟ್ನಲ್ಲಿ ಈಗ ಸುಮಾರು 192 ಕುಟುಂಬಗಳು, ಅಂದಾಜು 700-800 ಜನರು ವಾಸಿಸುತ್ತಿದ್ದಾರೆ. ಈ ರಸ್ತೆಯೇ ಅವರ ದಿನನಿತ್ಯದ ಮಾರ್ಗವಾಗಿದೆ. ರೈತರು ಹೊಲಕ್ಕೆ ಹೋಗಲು, ಮಕ್ಕಳು ಶಾಲೆಗೆ ಹೋಗಲು ಇದೇ ರಸ್ತೆಯನ್ನು ಬಳಸುತ್ತಾರೆ. ಪ್ರತಿ ದಿನ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಳಕವಾಡ ಗ್ರಾಮದ ಶಾಲೆಗೆ ಈ ಮಾರ್ಗದಿಂದ ಹೋಗುತ್ತಾರೆ. ಇಂತಹ ದುಸ್ಥಿತಿಯಲ್ಲೂ ಮಕ್ಕಳು ಶಾಲೆಗೆ ಹೋಗಬೇಕಾದರೆ, ತಂದೆ-ತಾಯಂದಿರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆಶ್ರಯ ಪ್ಲಾಟ್ನಲ್ಲಿ ನೀರು, ಚರಂಡಿ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಕೊರತೆಯೂ ತೀವ್ರವಾಗಿದೆ. ಜೆಜೆಎಂ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಅಗದಿರುವ ತಗ್ಗು ಮುಚ್ಚಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಸ್ಥಳೀಯ ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹೆದರುತ್ತಿದ್ದಾರೆ. “ಮಕ್ಕಳು ಕಾಲು ಜಾರಿ ಬಿದ್ದು ಗಾಯ ಆಗುವ ಭೀತಿ ಎದುರಾಗಿದೆ. ಗ್ರಾಮ ಪಂಚಾಯಿತಿಯವರು ಕ್ಯಾರೆ ಎನ್ನುತ್ತಿಲ್ಲ ಎಂಬುದು ಮಹಿಳೆಯರ ಆರೋಪವಾಗಿದೆ. ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.
Laxmi News 24×7